ADVERTISEMENT

ಹೌರಾ|ನಮಾಜ್‌ ವೇಳೆ ರಸ್ತೆ ಸಂಚಾರ ನಿಷೇಧ ಖಂಡಿಸಿ ಹನುಮಾನ್‌ಚಾಲೀಸಾ ಪಠಿಸಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 3:12 IST
Last Updated 26 ಜೂನ್ 2019, 3:12 IST
ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹನುಮಾನ್‌ ಚಾಲಿಸಾ ಪಠಣ ಮಾಡಿದರು. ಚಿತ್ರ: ಎಎನ್‌ಐ ಟ್ವೀಟ್‌
ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹನುಮಾನ್‌ ಚಾಲಿಸಾ ಪಠಣ ಮಾಡಿದರು. ಚಿತ್ರ: ಎಎನ್‌ಐ ಟ್ವೀಟ್‌   

ಹೌರ:ಮುಸ್ಲಿಂ ಸಮಾಜದ ಜನರು ಶುಕ್ರವಾರ ಪ್ರಾರ್ಥನೆ(ನಮಾಜ್‌) ಸಲ್ಲಿಸಲು ರಸ್ತೆಯಲ್ಲಿ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಪಶ್ಚಿಮ ಬಂಗಾಳದ ಹೌರದಲ್ಲಿ ಬಾಲ್ಯಾ ಖಲ್‌ ಬಳಿ ರಸ್ತೆಯಲ್ಲಿ ಧರಣಿ ಕುಳಿತು ಹನುಮಾನ್‌ ಚಾಲಿಸಾ ಪಠಿಸಿದ್ದಾರೆ.

‘ಶುಕ್ರವಾರ ನಮಾಜ್‌ ಸಲ್ಲಿಸುವ ಕಾರಣ ಇಲ್ಲಿನ ಜಿ.ಟಿ ರಸ್ತೆಯನ್ನು ಬಂದ್‌ ಮಾಡಲಾಗುತ್ತದೆ. ಇದರಿಂದಾಗಿ ರೋಗಿಗಳು ಸೂಕ್ತ ಸಮಯಕ್ಕೆ ಆಸ್ಪತ್ರೆ ತಲುಪಲಾಗದೆ ಸಾವಿಗೀಡಾಗುತ್ತಾರೆ. ಜನರು ಸಮಯಕ್ಕೆ ಸರಿಯಾಗಿ ಕಚೇರಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಶುಕ್ರವಾರದ ಪ್ರಾರ್ಥನೆ ವರೆಗೆ ನಮ್ಮ ಪಠಣ ಮುಂದುವರಿಯಲಿದೆ’ ಎಂದು ಪಕ್ಷದ ಹೌರಾ ಜಿಲ್ಲಾ ಯುವ ಮೋರ್ಚಾದ ಒ.ಪಿ. ಸಿಂಗ್‌ ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟ್‌ ಮಾಡಿದೆ.

‘ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರ್ಯಾಂಡ್‌ ಟ್ರಂಕ್‌ ರಸ್ತೆ ಮತ್ತು ಇತರ ಮುಖ್ಯ ರಸ್ತೆಗಳನ್ನು ಶುಕ್ರವಾರದ ಪ್ರಾರ್ಥನೆಗಾಗಿ ನಿಷೇಧಿಸಲಾಗಿದೆ. ಇದರಿಂದಾಗಿ ರೋಗಿಗಳು ಸಾಯುತ್ತಾರೆ. ಜನರು ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರಾರ್ಥನೆ ವೇಳೆ ರಸ್ತೆಯಲ್ಲಿ ಸಂಚಾರ ನಿಷೇಧವನ್ನು ಎಲ್ಲಿಯವರೆಗೆ ಮುಂದುವರೆಸುತ್ತಾರೊ ಅಲ್ಲಿಯವರೆಗೆ ನಾವೂ ಹನುಮಾನ್‌ ಮಂದಿರಗಳ ಸಮೀಪದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಹನುಮಾನ್‌ ಚಾಲಿಸಾವನ್ನು ಪಠಿಸುತ್ತೇವೆ’ ಎಂದು ಸಿಂಗ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.