ರಾಜ್ಕೋಟ್ನಲ್ಲಿ ಹೋಲಿಕಾ ದಹನ್
(ಪಿಟಿಐ ಚಿತ್ರ)
ನವದೆಹಲಿ: ಹೋಳಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.
'ಬಣ್ಣಗಳ ಹಬ್ಬ ಹೋಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು. ಹರ್ಷೋಲ್ಲಾಸದ ಈ ಹಬ್ಬವು ಏಕತೆ, ಪ್ರೀತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುತ್ತದೆ. ಈ ಹಬ್ಬವು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಈ ಶುಭ ಸಂದರ್ಭದಲ್ಲಿ ಭಾರತಮಾತೆಯ ಎಲ್ಲ ಮಕ್ಕಳ ಜೀವನದಲ್ಲಿ ಪ್ರಗತಿ, ಸಮೃದ್ಧಿ, ಆನಂದಮಯವಾಗಿರಲಿ ಎಂದು ನಾವೆಲ್ಲರೂ ಸಂಕಲ್ಪ ಮಾಡೋಣ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ತಿಳಿಸಿದ್ದಾರೆ.
'ನಿಮಗೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಆನಂದದಿಂದ ತುಂಬಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ, ಚೈತನ್ಯವನ್ನು ತುಂಬುತ್ತದೆ ಮತ್ತು ಏಕತೆಯ ಬಣ್ಣವನ್ನು ಮತ್ತಷ್ಟು ಗಾಢವಾಗಿಸುತ್ತದೆ' ಎಂದು ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೋಳಿ ಹಬ್ಬದ ಶುಭಾಶಯ ಕೋರಿದ್ದು, 'ಬಣ್ಣದ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು, ಉತ್ಸಾಹ ಹಾಗೂ ಸಂತೋಷವನ್ನು ತರಲಿ' ಎಂದು ಆಶಿಸಿದ್ದಾರೆ.
'ಹೋಳಿ ವಿವಿಧತೆಯ ಹಬ್ಬವಾಗಿದೆ. ಭಯ, ಅಸೂಯೆ, ದ್ವೇಷ, ತಾರತಮ್ಯಗಳನ್ನು ಹೋಗಲಾಡಿಸುವ ಹಬ್ಬ ಇದಾಗಿದೆ. ಬಣ್ಣಗಳ ವೈವಿಧ್ಯತೆಯನ್ನು ಆನಂದಿಸಲು ಹೋಳಿ ನಮಗೆ ಸ್ಫೂರ್ತಿ ನೀಡುತ್ತದೆ. ಬನ್ನಿ ಬಹು-ಸಾಂಸ್ಕೃತಿಕ ಸಮಾಜವನ್ನು ಏಕತೆ, ಸಹೋದರತ್ವ, ಸಾಮರಸ್ಯಗಳ ಬಣ್ಣಗಳಿಂದ ತುಂಬೋಣ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭ ಹಾರೈಸಿದ್ದಾರೆ.
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದು, 'ಪ್ರಕಾಶಮಾನವಾದ ಬಣ್ಣಗಳು ನಿಮ್ಮ ಜೀವನವನ್ನು ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನಿಂದ ತುಂಬಲಿ' ಎಂದು ಶುಭ ಹಾರೈಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, 'ಬಣ್ಣಗಳ ಹಬ್ಬ ಹೋಳಿಯು ಸರ್ವರಿಗೂ ಸಂತೋಷ ನೆಮ್ಮದಿ ತರಲಿ ಹಾಗೂ ಏಕತೆ, ಸಾಮರಸ್ಯದ ಸಂಕೇತವಾಗಿರುವ ಹಬ್ಬವು ಎಲ್ಲರ ಬದುಕಿಗೆ ಶುಭವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.