ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವೆ ಎಂದ ಗೆಹಲೋತ್‌: ಯಾರಾಗುವರು ರಾಜಸ್ಥಾನ ಸಿಎಂ?

ಪಿಟಿಐ
Published 23 ಸೆಪ್ಟೆಂಬರ್ 2022, 9:53 IST
Last Updated 23 ಸೆಪ್ಟೆಂಬರ್ 2022, 9:53 IST
ಅಶೋಕ್‌ ಗೆಹಲೋತ್‌
ಅಶೋಕ್‌ ಗೆಹಲೋತ್‌    

ಕೊಚ್ಚಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶವನ್ನು ಲೆಕ್ಕಿಸದೆ, ಒಗ್ಗಟ್ಟಿನಿಂದ ಕೆಲಸ ಮಾಡುವುದು ಮತ್ತು ಪಕ್ಷವು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮುವಂತೆ ಮಾಡುವುದು ಅಗತ್ಯವಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಒಂದು ವೇಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ, ತೆರವಾಗಲಿರುವ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜಸ್ಥಾನ ಉಸ್ತುವಾರಿ ಅಜಯ್ ಮಾಕನ್ ತೀರ್ಮಾನಿಸಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಉದಯಪುರ ಚಿಂತನ ಶಿಬಿರದಲ್ಲಿ ಕೈಗೊಂಡ ನಿರ್ಣಯದಂತೆ ಕಾಂಗ್ರೆಸ್‌ನಲ್ಲಿ ಈಗ ಒಬ್ಬರಿಗೆ ಒಂದೇ ಸ್ಥಾನವೆಂಬ ನಿಯಮವಿದೆ. ರಾಹುಲ್‌ ಗಾಂಧಿ ಅವರೂ ಗುರುವಾರ ಈ ವಾದವನ್ನು ಪ್ರತಿಪಾದಿಸಿದ್ದರು.

‘ನಾನು ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇನೆ. ನಾನು ರಾಜಸ್ಥಾನಕ್ಕೆ ಮರಳಿದ ನಂತರ (ನಾಮಪತ್ರ ಸಲ್ಲಿಸಲು) ದಿನಾಂಕ ನಿಗದಿಪಡಿಸುತ್ತೇನೆ. ಇದು ಪ್ರಜಾಪ್ರಭುತ್ವದ ಪ್ರಶ್ನೆ’ ಎಂದು ಅವರು ಹೇಳಿದರು.

ತಿರುವನಂತಪುರಂ ಸಂಸದ ಶಶಿ ತರೂರ್ ಅವರು ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎಂಬ ಊಹಾಪೋಹಗಳ ಕುರಿತು ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿರುವ ಯಾವ ಸ್ನೇಹಿತರು ಬೇಕಿದ್ದರೂ ಸ್ಪರ್ಧಿಸಬಹುದು. ಆದರೆ ಏಕತೆ ಮತ್ತು ಎಲ್ಲಾ ಹಂತಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯ ನಮ್ಮು ಮುಂದೆ ಇದೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌ನ ನನ್ನ ಸ್ನೇಹಿತರು ಸ್ಪರ್ಧಿಸಿದರೆ ಏನೂ ಸಮಸ್ಯೆ ಇಲ್ಲ. ಫಲಿತಾಂಶದ ನಂತರ ನಾವು ಬ್ಲಾಕ್, ಗ್ರಾಮ, ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡೋಣ. ನಮ್ಮ (ಕಾಂಗ್ರೆಸ್) ಚಿಂತನಾಕ್ರಮವನ್ನು ಆಧಾರವಾಗಿಟ್ಟುಕೊಂಡು ಮುನ್ನಡೆಯಬೇಕು. ಇದರಿಂದ ನಾವು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮುತ್ತೇವೆ’ ಎಂದು ಅವರು ಹೇಳಿದರು.

ಇದರೊಂದಿಗೆ ಕಾಂಗ್ರೆಸ್‌ ಹಲವು ವರ್ಷಗಳ ಬಳಿಕೆ ಮೊದಲ ಬಾರಿಗೆ ಗಾಂಧಿಯೇತರ ನಾಯಕರೊಬ್ಬರನ್ನು ಕಾಣುವುದು ಸ್ಪಷ್ಟವಾಗುತ್ತಾ ಸಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.