ADVERTISEMENT

ಜಾರ್ಖಂಡ್ ಸಿಎಂ ವಿರುದ್ಧ ಅತ್ಯಾಚಾರ ಆರೋಪ: ಅರ್ಜಿ ವಾಪಸ್‌ಗೆ ಕೋರ್ಟ್ ನಕಾರ

ಪಿಟಿಐ
Published 26 ಜನವರಿ 2021, 11:41 IST
Last Updated 26 ಜನವರಿ 2021, 11:41 IST
ಹೇಮಂತ್ ಸೊರೇನ್
ಹೇಮಂತ್ ಸೊರೇನ್   

ಮುಂಬೈ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ವಿರುದ್ಧ ಅತ್ಯಾಚಾರ ಆರೋ‍ಪದಡಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್‌.ಎಸ್. ಶಿಂಧೆ, ಮನೀಷ್ ಪಿತಾಲೆ ಅವರನ್ನೊಳಗೊಂಡ ಪೀಠವು, ‘ಫೆ. 18ರಂದು ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದು ತಿಳಿಸಿದೆ.

ಹೇಮಂತ್ ಸೊರೇನ್ ಅವರು ಮುಂಬೈನ ಹೋಟೆಲೊಂದರಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ 2013ರಲ್ಲಿ ಅರ್ಜಿದಾರ ಮಹಿಳೆ ಮೆಟ್ರೊಪಾಲಿಟನ್ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಅದೇ ವರ್ಷ ಬಾಂದ್ರಾ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರುವ ಮುನ್ನವೇ ಆ ಮಹಿಳೆ ಅರ್ಜಿ ವಾಪಸ್ ಪಡೆಯಲು ಮನವಿ ಸಲ್ಲಿಸಿದ್ದರು. ಆಗ ಕೋರ್ಟ್ ಅರ್ಜಿ ಹಿಂಪಡೆಯಲು ಅನುಮತಿ ನೀಡಿತ್ತು.

ADVERTISEMENT

2020ರ ಆಗಸ್ಟ್‌ನಲ್ಲಿ ಅರ್ಜಿದಾರ ಮಹಿಳೆಗೆ ಅಪಘಾತವಾಗಿತ್ತು. ಈ ಅಪಘಾತದ ಹಿಂದೆ ಹೇಮಂತ್ ಸೊರೇನ್ ಕೈವಾಡವಿರಬಹುದೆಂದು ಶಂಕಿಸಿ ಮಹಿಳೆ ಹೇಮಂತ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಬಾಂಬೆ ಹೈಕೋರ್ಟ್‌ನಲ್ಲಿ ಪ್ರಕರಣವಿರುವಾಗಲೇ ಮಹಿಳೆ ತನ್ನ ವಕೀಲರನ್ನು ಬದಲಾಯಿಸಲು ಕೋರಿದ್ದರು.

ಹೊಸ ವಕೀಲರ ಮೂಲಕ ಅತ್ಯಾಚಾರ ಆರೋಪ ಹಿಂಪಡೆಯಲು ಮಹಿಳೆ ಮನವಿ ಸಲ್ಲಿಸಿದ್ದರು. ಆದರೆ, ಅರ್ಜಿ ಹಿಂಪಡೆಯಲು ಅನುಮತಿ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಈ ನಡುವೆ ಅರ್ಜಿ ಹಿಂಪಡೆಯಬಾರದು ಎಂದು ಕೋರಿ ನ್ಯಾಯಾಲಯಕ್ಕೆ ಪತ್ರಕರ್ತ ಸುನೀಲ್ ಕುಮಾರ್ ತಿವಾರಿ ಹಾಗೂ ಸ್ತ್ರೀ ರೋಷನಿ ಟ್ರಸ್ಟ್‌ ಅರ್ಜಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.