ADVERTISEMENT

ಕೃತಜ್ಞತೆ ಇಲ್ಲದ ದಿನೇಶ್ ತ್ರಿವೇದಿ ಬೆನ್ನಿಗೆ ಇರಿದಿದ್ದಾರೆ: ಟಿಎಂಸಿ

ಪಿಟಿಐ
Published 6 ಮಾರ್ಚ್ 2021, 15:32 IST
Last Updated 6 ಮಾರ್ಚ್ 2021, 15:32 IST
ದಿನೇಶ್ ತ್ರಿವೇದಿ (ಪಿಟಿಐ ಚಿತ್ರ)
ದಿನೇಶ್ ತ್ರಿವೇದಿ (ಪಿಟಿಐ ಚಿತ್ರ)   

ಕೋಲ್ಕತ್ತ: ದಿನೇಶ್ ತ್ರಿವೇದಿ ಅವರು ಕೃತಜ್ಞತೆಯಿಲ್ಲದವರು. ಪಕ್ಷಕ್ಕೆ ಹಿಂದಿನಿಂದ ಇರಿದಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟೀಕಿಸಿದೆ.

ಟಿಎಂಸಿ ಮಾಜಿ ಸಂಸದ ಹಾಗೂ ಹಿರಿಯ ರಾಜಕಾರಣಿ ದಿನೇಶ್ ತ್ರಿವೇದಿ ಶನಿವಾರ ಬಿಜೆಪಿ ಸೇರಿದ್ದಾರೆ. ಇದರ ಬೆನ್ನಲ್ಲೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿಯು, ತ್ರಿವೇದಿ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದೆ.

‘ಕಳೆದ ಅನೇಕ ವರ್ಷಗಳಲ್ಲಿ ಅವರು (ತ್ರಿವೇದಿ) ಏನೂ ಹೇಳಲಿಲ್ಲ. ಈಗ, ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಪಕ್ಷದ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ. ಅವರು ಕೃತಜ್ಞತೆಯಿಲ್ಲದವರು. ರಾಜ್ಯದ ಜನತೆಯನ್ನು ವಂಚಿಸಿದ್ದಾರೆ’ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ADVERTISEMENT

‘ತ್ರಿವೇದಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಹೊಂದಿದ್ದರು. ಅವರಿಗೆ ಹಲವಾರು ಜವಾಬ್ದಾರಿಗಳನ್ನೂ ವಹಿಸಲಾಗಿತ್ತು. ಅವರು ಪಕ್ಷಕ್ಕೆ ಕೃತಜ್ಞರಾಗಿರಬೇಕಾದ ಸಂದರ್ಭದಲ್ಲೇ ಹಿಂದಿನಿಂದ ಇರಿದಿದ್ದಾರೆ’ ಎಂದೂ ಘೋಷ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ತ್ರಿವೇದಿ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದೆ. ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೇನೆ. ಉಸಿರುಗಟ್ಟುತ್ತಿದೆ ಎಂದು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.