ADVERTISEMENT

ಮನಸುಖ್ ಹಿರೆನ್ ನಿಗೂಢ ಸಾವು ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಸಚಿನ್ ವಾಜೆ ಅರ್ಜಿ

ಪಿಟಿಐ
Published 13 ಮಾರ್ಚ್ 2021, 6:28 IST
Last Updated 13 ಮಾರ್ಚ್ 2021, 6:28 IST
ಸಚಿನ್ ವಾಜೆ
ಸಚಿನ್ ವಾಜೆ   

ಮುಂಬೈ: ಆಟೊಮೊಬೈಲ್ ಬಿಡಿಭಾಗಗಳ ಡೀಲರ್ ಮನಸುಖ್ ಹಿರೆನ್‌ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಹಲವು ಟೀಕೆಗಳಿಗೆ ಗುರಿಯಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಠಾಣೆ ಜಿಲ್ಲೆಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಸಚಿನ್ ಅವರ ಅರ್ಜಿ ವಿಚಾರಣೆ ಮಾರ್ಚ್‌ 19ಕ್ಕೆ ನಿಗದಿಪಡಿಸಲಾಗಿದ್ದು, ಈ ವೇಳೆ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸುವಂತೆ ತನಿಖಾಧಿಕಾರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಮನಸುಖ್ ಹಿರೆನ್ಅವರ ಸಾವಿನಲ್ಲಿ ಅವರ ಪತ್ನಿ ಭಾಗಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಆರೋಪಿಸಿದ್ದರು. ನಂತರ ಅವರ ವಿರುದ್ಧ ಹಲವು ರೀತಿಯ ಟೀಕೆಗಳು ವ್ಯಕ್ತವಾದವು. ಕಳೆದ ಬುಧವಾರ ಅವರನ್ನು ಮುಂಬೈ ಅಪರಾಧ ವಿಭಾಗದಿಂದ ಪೊಲೀಸರ ನಾಗರಿಕ ಸೌಲಭ್ಯ ಕೇಂದ್ರಕ್ಕೆ (ಸಿಎಫ್‌ಸಿ) ವರ್ಗಾಯಿಸಲಾಗಿದೆ.

ADVERTISEMENT

ಫೆಬ್ರುವರಿ 25 ರಂದು ದಕ್ಷಿಣ ಮುಂಬೈನಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳು ಮತ್ತು ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೊ ವಾಹನ ಪತ್ತೆಯಾಗಿತ್ತು. ಈ ವಾಹನ ಮನಸುಖ್ ಹಿರೆನ್ಎಂಬುವವರ ಹೆಸರಲ್ಲಿತ್ತು. ಇದು ವಾರದ ಹಿಂದೆಯೇ ಕಳ್ಳತನವಾಗಿದೆ ಎಂದು ಅವರು ದೂರು ನೀಡಿದ್ದರು. ಮಾರ್ಚ್ 5 ರಂದು ಠಾಣೆಯ ಹಳ್ಳವೊಂದರಲ್ಲಿ ಮನಸುಖ್ ಹಿರೆನ್ ಶವವಾಗಿ ಪತ್ತೆಯಾಗಿದ್ದರು.

ವಿಚಾರಣೆ ವೇಳೆ ‘ತಮ್ಮ ಪತಿ ಎಸ್‌ಯುವಿ ವಾಹನವನ್ನು ಕಳೆದ ನವೆಂಬರ್‌ನಲ್ಲಿ ಸಚಿನ್ ವಾಜೆ ಅವರಿಗೆ ಕೊಟ್ಟಿದ್ದರು‘ ಎಂದು ಹಿರೆನ್ಅವರ ಪತ್ನಿ ಆರೋಪಿಸಿದ್ದರು.

‍ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ವಿಶೇಷ ತನಿಖಾ ದಳದ ಅಧಿಕಾರಿಗಳು, ಇತ್ತೀಚೆಗೆ ವಾಜೆ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಈ ವೇಳೆ ಹಿರಾನ್ ಅವರಿಂದ ಎಸ್‌ಯುವಿ ವಾಹನವನ್ನು ಬಳಸಿರುವಕುರಿತು ಅವರ ಪತ್ನಿ ಮಾಡಿರುವಆರೋಪವನ್ನು ವಾಜೆ ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.