ADVERTISEMENT

'ಗುವಾಹಟಿಯಲ್ಲಿ ಎಷ್ಟು ದಿನ ಅಡಗಿರುವಿರಿ'–ಶಿವಸೇನಾ ಬಂಡಾಯ ಶಾಸಕರಿಗೆ ರಾವುತ್‌

ಬಂಡಾಯ ಶಾಸಕರ ಸಭೆ ಕರೆದ ಶಿವಸೇನಾ ಮುಖಂಡ ಏಕನಾಥ ಶಿಂಧೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2022, 5:11 IST
Last Updated 26 ಜೂನ್ 2022, 5:11 IST
ನಾಗಪುರದಲ್ಲಿ ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ಪೋಸ್ಟರ್‌ ಹರಿದಿರುವುದು
ನಾಗಪುರದಲ್ಲಿ ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ಪೋಸ್ಟರ್‌ ಹರಿದಿರುವುದು   

ಮುಂಬೈ/ ಗುವಾಹಟಿ: ಶಿವಸೇನಾದ ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ ಶಿಂಧೆ ಅವರು ಇಂದು ಮಧ್ಯಾಹ್ನ 12ಕ್ಕೆ ಶಾಸಕರ ಸಭೆ ಕರೆದಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಗುವಾಹಟಿಯ ಹೋಟೆಲ್‌ನಲ್ಲೇ ಸಭೆ ಕರೆದಿರುವುದಾಗಿ ವರದಿಯಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾದ 16 ಶಾಸಕರಿಗೆ ವಿಧಾನಸಭಾ ಕಾರ್ಯಾಲಯವು ನೋಟಿಸ್‌ ನೀಡಿದೆ. ಸೋಮವಾರ ಸಂಜೆಯ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಏಕನಾಥ ಶಿಂಧೆ ಶಾಸಕರೊಂದಿಗೆ ಚರ್ಚಿಸಲಿದ್ದಾರೆ.

ಬಂಡಾಯ ಶಾಸಕರ ಕುರಿತು ಟ್ವೀಟಿಸಿರುವ ಸಂಜಯ್‌ ರಾವುತ್‌, 'ಗುವಾಹಟಿಯಲ್ಲಿ ಎಷ್ಟು ದಿನ ಅಡಗಿರುವಿರಿ' ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಗುವಾಹಟಿಯ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಜೂನ್‌ 30ರವರೆಗೂ ಬಂಡಾಯ ಶಾಸಕರು ವಾಸ್ತವ್ಯ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.

'ಹೋಟೆಲ್‌ನಲ್ಲಿ ತಂಗಿರುವ ಪ್ರತಿಯೊಬ್ಬರ ಶಾಸಕರಿಗಾಗಿ ನಿತ್ಯ 9 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ' ಎಂದು ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.

ಒತ್ತಾಯ ಪೂರ್ವಕವಾಗಿ ಗುವಾಹಟಿ ಕರೆದುಕೊಂಡು ಹೋಗಿರುವ ಶಾಸಕರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಜನರು ಮನೆ ಕಳೆದುಕೊಂಡಿದ್ದಾರೆ, ಅವರಿಗೆ ಯಾವುದೇ ನೆರವು ಸಿಕ್ಕಿಲ್ಲ ಎಂದಿದ್ದಾರೆ.

ಕೋವಿಡ್‌ನಿಂದ ಚೇತರಿಸಿಕೊಂಡ ರಾಜ್ಯಪಾಲ ಕೋಶಿಯಾರಿ

ಕೋವಿಡ್‌–19 ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ಅವರು ಇಂದು ಆಸ್ಪತ್ರೆಯಿಂದ ಮರಳಿದ್ದಾರೆ. ಅವರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ಶಿವಸೇನಾ ಶಾಸಕರ ಬಂಡಾಯದಿಂದಾಗಿ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರದಲ್ಲಿ ಅಸ್ಥಿರತೆ ಎದುರಾಗಿದ್ದು, ಈ ಸಮಯದಲ್ಲಿ ರಾಜ್ಯಪಾಲರ ಉಪಸ್ಥಿತಿಯು ಮಹತ್ವ ಪಡೆದಿದೆ. ಸರ್ಕಾರಕ್ಕೆ ಶಾಸಕರ ಬೆಂಬಲವನ್ನು ಸಾಬೀತು ಪಡಿಸಲು ರಾಜ್ಯಪಾಲರು ಸೂಚಿಸಬಹುದಾಗಿದೆ. ವಿಶ್ವಾಸ ಮತ ಯಾಚನೆ ಅಥವಾ ಉದ್ಧವ್‌ ಠಾಕ್ರೆ ಅವರ ಸರ್ಕಾರ ಪ್ರಸ್ತಾಪಿಸಿದರೆ, ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ ರಾಜ್ಯಪಾಲರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.