ಗಾಂಧಿನಗರ(ಗುಜರಾತ್):ಈ ದೇಶ ಪ್ರೀತಿ, ಸಾಮರಸ್ಯ ಮತ್ತು ಸಹೋದರತ್ವದ ಅಡಿಪಾಯಗಳ ಮೇಲೆ ನಿರ್ಮಾಣವಾಗಿದೆ. ಆದರೆ, ಪ್ರಸ್ತುತ ದೇಶದಲ್ಲಿ ಏನಾಗುತ್ತಿದೆ ಎಂಬುದು ತುಂಬಾ ದುಃಖದ ಸಂಗತಿ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಇಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ನ ಜನ ಸಂಕಲ್ಪ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಚುನಾವಣೆ ನಿಖರವಾಗಿ ಏನೆಂಬುದನ್ನು ನೀವು ಯೋಚಿಸಬೇಕು. ಈ ಚುನಾವಣೆಯಲ್ಲಿ ನೀವು ಏನನ್ನು ಆಯ್ಕೆ ಮಾಡಲಿದ್ದೀರಿ? ಎಂದು ಪ್ರಿಯಾಂಕಾ ಜನರನ್ನುಪ್ರಶ್ನಿಸಿದರು.
ನಿಮ್ಮ ಭವಿಷ್ಯವನ್ನು ನೀವು ಆಯ್ಕೆ ಮಾಡಲಿದ್ದೀರಿ. ನಿಷ್ಪ್ರಯೋಜಕ ಸಮಸ್ಯೆಗಳನ್ನು ಬೆಳೆಸಬಾರದು. ಚರ್ಚಿಸಬೇಕಾದ ವಿಷಯಗಳು ನಿಮಗಾಗಿ ಅತ್ಯಂತ ಪ್ರಮುಖವಾದದ್ದು ಮತ್ತು ನೀವು ಹೇಗೆ ಮುಂದುವರಿಯಬಹುದು ಎಂಬುದನ್ನುಒಳಗೊಂಡಿರಬೇಕುಎಂದು ಕಿವಿಮಾತು ಹೇಳಿದರು.
ಯುವ ಜನ ಹೇಗೆ ಉದ್ಯೋಗ ಗಳಿಸುತ್ತಾರೆ? ಮಹಿಳೆಯರು ಹೇಗೆ, ಎಷ್ಟರಮಟ್ಟಿಗೆ ಸುರಕ್ಷಿತವಾಗಿರುತ್ತಾರೆ? ರೈತರಿಗೆ ಏನು ಮಾಡಲಾಗುವುದು ಎಂಬ ಅಂಶಗಳು ಚುನಾವಣೆಯ ಪ್ರಮುಖ ವಿಷಯಗಳು. ಆದ್ದರಿಂದ, ನೀವು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.
ನಮ್ಮ ಸಂಸ್ಥೆಗಳು ನಾಶವಾಗುತ್ತಿವೆ. ನೀವು ನೋಡುವೆಲ್ಲೆಡೆ ದ್ವೇಷ ಹರಡುತ್ತಿದೆ. ನೀವು ಮತ್ತು ನಾವು ರಾಷ್ಟ್ರವನ್ನು ರಕ್ಷಿಸಲು ಒಟ್ಟಿಗೆ ಕಾರ್ಯೋನ್ಮುಖರಾಗುವುದು ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.