ಎಐ ಚಿತ್ರ
ಮೀರಟ್(ಉತ್ತರ ಪ್ರದೇಶ): ಇಲ್ಲಿನ ಸಿಮೌಲಿ ಗ್ರಾಮದ ರೈತರೊಬ್ಬರ ಮನೆಯಂಗಳದಲ್ಲಿ ಒಮ್ಮೆಲೆ 100ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಿದ್ದು, ಎಲ್ಲರಲ್ಲಿಯೂ ಗಾಬರಿ ಮೂಡಿಸಿದೆ.
ರೈತ ಮಹ್ಫೂಜ್ ಸೈಫಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಸೈಫಿ ಅವರು ಮಲಗಲು ಸಿದ್ದರಾಗುತ್ತಿದ್ದಾಗ ಹಾವೊಂದು ಕಾಣಿಸಿಕೊಂಡಿದ್ದು, ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ. ತಕ್ಷಣ ಒಂದರ ನಂತರ ಒಂದರಂತೆ ಸುಮಾರು 100ಕ್ಕೂ ಹೆಚ್ಚು ಹಾವುಗಳು ಕಾಣಿಸಿಕೊಂಡಿವೆ.
ಹಾವುಗಳು ಕಂಡು ಗಾಬರಿಗೊಂಡ ಸೈಫಿ ಅವರು ಕುಟುಂಬ ಸದಸ್ಯರನ್ನು, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಎಲ್ಲರೂ ಸೇರಿ ಸುಮಾರು 50ಕ್ಕೂ ಹೆಚ್ಚು ಹಾವುಗಳು ಕೊಂದು ಹೂತು ಹಾಕಿದ್ದಾರೆ.
ಏತನ್ಮಧ್ಯೆ, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅರಣ್ಯ ಅಧಿಕಾರಿಗಳ ಕಣ್ಣಿಗೂ ಬಿದ್ದಿದೆ. ಆ ತಕ್ಷಣ ಗ್ರಾಮಕ್ಕೆ ಧಾವಿಸಿದ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.
‘ಇಲಾಖೆಗೆ ತಿಳಿಸದೆಯೇ ಹಾವುಗಳನ್ನು ಕೊಂದು ನೆಲದಲ್ಲಿ ಹೂಳಲಾಗಿದೆ. ಅವು ಸಂರಕ್ಷಿತ ಜೀವಿಗಳಾಗಿದ್ದು, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಅರಣ್ಯ ಇಲಾಖೆಗೆ ತಿಳಿಸುವುದು ಅವಶ್ಯಕ’ ಎಂದು ಡಿಎಫ್ಒ ರಾಜೇಶ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
‘ಅವು ವಿಷಕಾರಿ ಹಾವುಗಳಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನೀರು ಮತ್ತು ಚರಂಡಿಗಳಂತಹ ಸ್ಥಳಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ’ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.