ಬೆಂಗಳೂರು: ‘ನಾನು ಯಾರಿಂದಲೂ ಲಂಚ ಪಡೆದಿಲ್ಲ, ಯಾರಿಗೂ ಮೋಸ ಮಾಡಿಲ್ಲ, ಯಾರಿಗೂ ಕೆಟ್ಟದ್ದನ್ನೂ ಬಯಸಿಲ್ಲ. ಆದರೂ ಕೂಡಾ ನನ್ನ 40 ವರ್ಷಗಳ ರಾಜಕಾರಣಕ್ಕೆ ಕೊನೆ ಹಾಡಬೇಕು ಎಂಬ ದುರುದ್ದೇಶದಿಂದ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಇದು ನನ್ನ ಅಂತ್ಯವಲ್ಲ, ನನ್ನ ಹೋರಾಟದ ಆರಂಭ’ ಎಂದು ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ವಿಮಾನನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಸಾದಹಳ್ಳಿ ಗೇಟ್ನಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನ್ನ ಕುಟುಂಬ ಮಾತ್ರವಲ್ಲ, 100ಕ್ಕೂ ಅಧಿಕ ಸ್ನೇಹಿತರು, ಬಂಧುಗಳಿಗೆ ನೀಡಿದ ಕಿರುಕುಳವನ್ನು ಮರೆಯಲು ಸಾಧ್ಯವಿಲ್ಲ, ನನಗೆ ಆಗಿರುವ ಕಿರುಕುಳವನ್ನು ನಿಮಗೇ ಆದ ಕಿರುಕುಳ ಎಂಬಂತೆ ನೀವು ಭಾವಿಸಿ ನನ್ನನ್ನು ಕಂಡಿದ್ದೀರಿ, ನಿಮ್ಮ ಋಣವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.
‘ನಾನು ಕೆಪಿಸಿಸಿ ಕಚೇರಿಯಲ್ಲಿ ನನ್ನ ಭಾವನೆಗಳನ್ನು ತಿಳಿಸುವೆ. ಆದರೆ ನನಗೆ ಬೆಂಬಲ ನೀಡಿದ ಹಲವಾರು ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ ಸಹಿತ ಎಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.