ADVERTISEMENT

ರಾಹುಲ್ ಗಾಂಧಿಯನ್ನು ಅಮೇಥಿಯಿಂದ ವಯನಾಡಿಗೆ ಕಳುಹಿಸಿದ್ದು ನಾನೇ: ಸ್ಮೃತಿ ಇರಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮೇ 2023, 6:20 IST
Last Updated 23 ಮೇ 2023, 6:20 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ತಿರುವನಂತನಪುರ: ‘ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಕಳುಹಿಸಿದ್ದು ನಾನು‘ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಕೇರಳದಲ್ಲಿ ಭಾರತೀಯ ಮಜ್ದೂರ್ ಸಂಘ ರಾಜ್ಯ ಘಟಕ ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿ ಸ್ಮೃತಿ ಇರಾನಿ ಮಾತನಾಡಿದರು. ಈ ವೇಳೆ ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸದೆ ಪರೋಕ್ಷ ದಾಳಿ ನಡೆಸಿದ್ದಾರೆ.

‘ಅವರನ್ನು(ರಾಹುಲ್ ಗಾಂಧಿ) ಅಲ್ಲಿಂದ(ಅಮೇಥಿ) ಕಳುಹಿಸಲು ಕಾರಣವೇನು? ಏಕೆ? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಅವರು ಅಲ್ಲಿನ ಸಂಸದರಾಗಿದ್ದಾಗ ಅಲ್ಲಿನ ಶೇಕಡ 80ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಜಿಲ್ಲಾಧಿಕಾರಿಗೆ ಸರಿಯಾದ ಕಚೇರಿ ಇರಲಿಲ್ಲ. ಅಗ್ನಿಶಾಮಕ ಠಾಣೆ, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ, ಕ್ರೀಡಾಂಗಣ ಯಾವ ಸೌಲಭ್ಯವೂ ಇರಲಿಲ್ಲ. ಅಲ್ಲಿಂದ ಅವರನ್ನು ಕಳುಹಿಸಿದ ಮೇಲೆ ಎಲ್ಲ ಸೌಲಭ್ಯಗಳು ಬಂದವು‘ ಎಂದರು.

ADVERTISEMENT

‘ಅವರು (ರಾಹುಲ್ ಗಾಂಧಿ) ವಯನಾಡಿನಲ್ಲಿಯೇ ಮತ್ತೆ ಉಳಿದರೆ, ವಯನಾಡ್‌ಗೆ ಅಮೇಥಿಯಂತ ಪರಿಸ್ಥಿತಿ ಬರುತ್ತದೆ. ನೀವು ಅವರನ್ನು ಇಲ್ಲಿ ಉಳಿಯದಂತೆ ನೋಡಿಕೊಳ್ಳಿ‘ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ಸೋಲಿಸುವಂತೆ ಹೇಳಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಲೋಕಾಸಭಾ ಕ್ಷೇತ್ರದಿಂದ ಸ್ಮೃತಿ ಇರಾನಿ ಸ್ಪರ್ಧಿಸಿದ್ದು, ರಾಹುಲ್ ಗಾಂಧಿ ಅವರನ್ನು ಸುಮಾರು 55,000 ಮತಗಳ ಅಂತರದಿಂದ ಸೋಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.