ADVERTISEMENT

ಮದ್ಯಸೇವನೆ ವಯಸ್ಸು: ಬಿಜೆಪಿ 25ಕ್ಕೆ ಏರಿಸಿದರೆ,ನಾವು 30ಕ್ಕೆ ಏರಿಸುತ್ತೇವೆ –ಎಎಪಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 16:20 IST
Last Updated 23 ಮಾರ್ಚ್ 2021, 16:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮದ್ಯ ಖರೀದಿಸುವ ಕನಿಷ್ಠ ವಯಸ್ಸನ್ನು 25 ವರ್ಷ ಮಾಡಿದರೆ, ಎಎಪಿ ಅದನ್ನು ದೆಹಲಿಯಲ್ಲಿ 30 ವರ್ಷಕ್ಕೆ ಹೆಚ್ಚಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅರುಣಾಚಲ ಪ್ರದೇಶಗಳಲ್ಲಿ ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು 21 ವರ್ಷ, ಬಿಜೆಪಿ ಆಡಳಿತದಲ್ಲಿರುವ ಗೋವಾದಲ್ಲಿ 18 ವರ್ಷ ಎಂದು ಅವರು ಹೇಳಿದರು.

ಬ್ಲ್ಯಾಕ್ ಮಾರುಕಟ್ಟೆಗಳು ಮತ್ತು ಆರ್ಥಿಕ ದುರುಪಯೋಗವನ್ನು ರಕ್ಷಿಸುವ ಸಲುವಾಗಿ ಮದ್ಯ ಸೇವನೆಯ ವಯಸ್ಸನ್ನು ಕಡಿಮೆ ಮಾಡುವ ನಿರ್ಧಾರದ ವಿರುದ್ಧ ಬಿಜೆಪಿ ಮಾತನಾಡುತ್ತಿದೆ ಎಂದು ಭರದ್ವಾಜ್ ಹೇಳಿದ್ದಾರೆ.

ADVERTISEMENT

21 ವರ್ಷದೊಳಗಿನ ಯುವಕರು ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಿಗೆ ಹೋದಾಗ, ಪೊಲೀಸರು ರೆಸ್ಟೋರೆಂಟ್ ಮಾಲೀಕರಿಂದ ಹಣವನ್ನು ಸುಲಿಗೆ ಮಾಡುತ್ತಾರೆ ಮತ್ತು ಅದು 'ಉನ್ನತ' ಮಟ್ಟದಲ್ಲಿ ಸಾಗುತ್ತದೆ. ಹೀಗಾಗಿ 'ನಮ್ಮ ನಿರ್ಧಾರದಿಂದ, ಈ ದುಷ್ಕೃತ್ಯವನ್ನು ನಿಲ್ಲಿಸಲಾಗುವುದು ಮತ್ತು ಅದಕ್ಕಾಗಿಯೇ ಬಿಜೆಪಿ ಅಸಮಾಧಾನಗೊಂಡಿದೆ' ಎಂದು ಹೇಳಿದ್ದಾರೆ.

ಇಡೀ ದೇಶದಲ್ಲಿಯೇ ಮದ್ಯ ಸೇವನೆಯ ವಯಸ್ಸನ್ನು 25ಕ್ಕೆ ನಿಗದಿ ಮಾಡುವ ಕಾನೂನನ್ನು ತರಲು ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಕೇಳಬೇಕು, ಏಕೆಂದರೆ ಇದು ಏಕರೂಪತೆಯನ್ನು ತರುತ್ತದೆ. ಬಿಜೆಪಿಯ ಬೂಟಾಟಿಕೆಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷದಲ್ಲಿ ಇಂತಹ ಬೂಟಾಟಿಕೆಗಳನ್ನು ಯಾರೂ ನೋಡಿಲ್ಲ. ಬಿಜೆಪಿಗೆ ನಾಚಿಕೆಯಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ ಎಂದಿದ್ದಾರೆ.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮದ್ಯ ಸೇವನೆಯ ಕಾನೂನು ಅನೇಕ ವರ್ಷಗಳಿಂದ 21 ವರ್ಷಕ್ಕೆ ಮಿತಿಗೊಳಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಸೇರಿದಂತೆ ಡಜನ್‌ಗಟ್ಟಲೆ ರಾಜ್ಯಗಳಲ್ಲಿ 21 ವರ್ಷವಾಗಿದೆ. ಮದ್ಯ ಸೇವನೆಗೆ ಕಾನೂನಾತ್ಮಕ ವಯಸ್ಸು 18 ವರ್ಷ ಇರುವ ಗೋವಾದಲ್ಲಿ ಬಿಜೆಪಿ 15 ವರ್ಷಗಳ ಕಾಲ ಆಡಳಿತ ನಡೆಸಿದೆ' ಎಂದು ಹೇಳಿದರು.

'ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ವಯಸ್ಸನ್ನು 25 ವರ್ಷಕ್ಕೆ ಮರಳಿ ತರಲು ನಾನು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಮತ್ತು ವಿರೋಧ ಪಕ್ಷದ ನಾಯಕ ರಾಮವೀರ್ ಬಿಧುರಿ ಅವರಿಗೆ ಸವಾಲು ಹಾಕುತ್ತೇನೆ. ನಂತರ ನಾವು ಅದನ್ನು 30 ವರ್ಷಗಳನ್ನಾಗಿ ಮಾಡುತ್ತೇವೆ'. ಆದಾಯವನ್ನು ಕದಿಯಲು ಮತ್ತು ಕಪ್ಪು ವ್ಯಾಪಾರೋದ್ಯಮವನ್ನು ರಕ್ಷಿಸಲು ಬಿಜೆಪಿಯ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದರು.

ಮದ್ಯ ಸೇವನೆಯ ಕನಿಷ್ಠ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸುವ ಹೊಸ ಅಬಕಾರಿ ನೀತಿಯನ್ನು ದೆಹಲಿ ಕ್ಯಾಬಿನೆಟ್ ಸೋಮವಾರ ಅಂಗೀಕರಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.