ADVERTISEMENT

ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಮಿತಿ ರದ್ದು: ರಾಹುಲ್ ಗಾಂಧಿ ಭರವಸೆ

ಪಿಟಿಐ
Published 5 ಫೆಬ್ರುವರಿ 2024, 13:59 IST
Last Updated 5 ಫೆಬ್ರುವರಿ 2024, 13:59 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ರಾಂಚಿ: ಲೋಕಸಭಾ ಚುನಾವಣೆಯ ನಂತರ ‘ಇಂಡಿಯಾ’ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರದಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ ಮತ್ತು ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

ಜಾರ್ಖಂಡ್ ಮುಖ್ಯಮಂತ್ರಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾದ ಕಾರಣ ಬಿಜೆಪಿಯು ಅಲ್ಲಿನ ಜೆಎಂಎಂ, ಕಾಂಗ್ರೆಸ್, ಆರ್‌ಜೆಡಿ ಮೈತ್ರಿ ಸರ್ಕಾರವನ್ನು ಉರುಳಿಸಲು ಯತ್ನಿಸಿತು ಎಂದು ರಾಹುಲ್ ಆರೋಪಿಸಿದರು.

ADVERTISEMENT

‘ಮೈತ್ರಿಕೂಟದ ಎಲ್ಲ ಶಾಸಕರಿಗೆ, ಚಂಪೈ ಸೊರೇನ್‌ ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಏಕೆಂದರೆ ಅವರು ಬಿಜೆಪಿ–ಆರ್‌ಎಸ್‌ಎಸ್‌ ಪಿತೂರಿಯನ್ನು ತಡೆದಿದ್ದಾರೆ, ಬಡವರ ಸರ್ಕಾರವನ್ನು ರಕ್ಷಿಸಿದ್ದಾರೆ’ ಎಂದು ಇಲ್ಲಿ ರ್‍ಯಾಲಿಯೊಂದರಲ್ಲಿ ಹೇಳಿದರು.

ದಲಿತರು, ಆದಿವಾಸಿಗಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಕಂಪನಿಗಳು, ಆಸ್ಪತ್ರೆಗಳು, ಶಾಲೆ–ಕಾಲೇಜುಗಳು ಮತ್ತು ನ್ಯಾಯಾಲಯಗಳಲ್ಲಿ ಈ ಸಮುದಾಯಗಳ ಭಾಗವಹಿಸುವಿಕೆ ಕಡಿಮೆ ಇದೆ ಎಂದು ರಾಹುಲ್ ಹೇಳಿದರು. ‘ಇದು ದೇಶದ ಮುಂದೆ ಇರುವ ಅತಿದೊಡ್ಡ ಪ್ರಶ್ನೆ. ನಮ್ಮ ಮೊದಲ ಹೆಜ್ಜೆ ದೇಶದಲ್ಲಿ ಜಾತಿ ಗಣತಿ ನಡೆಸುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.