'ಕ್ರಿಕೆಟ್ ಮತ್ತು ರಾಜಕಾರಣದಲ್ಲಿ ಏನು ಬೇಕಾದರೂನಡೆಯಬಹುದು,’ ಎಂದು ತಾವು ಕಳೆದ ವಾರ ಹೇಳಿದ ಮಾತನ್ನು ಕೇಂದ್ರ ಸಚಿವ ನಿತೀನ್ ಗಡ್ಕರಿಮತ್ತೆ ನೆನಪಿಸಿಕೊಂಡಿದ್ದಾರೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಇಂದು ಬೆಳಗ್ಗೆ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ಈ ಹಿಂದಿನ ಹೇಳಿಕೆಯ ಮಾರ್ಮಿಕತೆಯನ್ನು ತೆರೆದಿಡಲು ಪ್ರಯತ್ನಿಸಿದ್ದಾರೆ.
ಮಹಾರಾಷ್ಟ್ರದ ಇಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಎಎನ್ಐನೊಂದಿಗೆ ಮಾತನಾಡಿರುವ ಗಡ್ಕರಿ, ‘ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದೆಂದು ನಾನು ಮೊದಲೇ ಹೇಳಿದ್ದೆ. ಈ ಹೇಳಿಕೆಯ ಹಿಂದಿನ ಮರ್ಮ ನಿಮಗೀಗ ಅರ್ಥವಾಯಿತೇ?’ ಎಂದು ಕೇಳಿದ್ದಾರೆ.
ಕ್ರಿಕೆಟ್ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಏನು ಬೇಕಾದರೂ ಸಂಭವಿಸಬಹುದು. ಯಾರು ನಮಗೆ ಸೋಲುತ್ತಿರುವಂತೆ ಕಾಣುತ್ತಾರೋ, ಅವರು ಪಂದ್ಯದ ಕೊನೆಯಲ್ಲಿ ಗೆಲ್ಲಲೂಬಹುದು ಎಂದು ನಿತೀನ್ ಗಡ್ಕರಿ ಕಳೆದ ವಾರ ನುಡಿದಿದ್ದರು.
ಇಂದು ಬೆಳಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡಣವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಎನ್ಸಿಪಿಯ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದ ಕೆಲ ಗಂಟೆಗಳಲ್ಲೇ ನಿತೀನ್ ಗಡ್ಕರಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.