ಚೆನ್ನೈ (ತಮಿಳುನಾಡು): ಮುಂದಿನ ಕೆಲವು ದಿನಗಳಲ್ಲಿ ದೇಶವಾಸಿಗಳಿಗೆ ಕೋವಿಡ್-19 ಲಸಿಕೆಯನ್ನು ವಿತರಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ತಿಳಿಸಿದ್ದಾರೆ.
ಎರಡನೇ ಹಂತದ ಲಸಿಕೆ ವಿತರಣೆ ತಾಲೀಮು (ಡ್ರೈ ರನ್) ಶುಕ್ರವಾರ ನಡೆಯುತ್ತಿದ್ದು, ಈ ಮಧ್ಯೆ ತಮಿಳುನಾಡಿಗೆ ಭೇಟಿ ನೀಡಿರುವ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಭಾರತವು ಉತ್ತಮ ಸಾಧನೆ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಈ ಲಸಿಕೆಗಳನ್ನು ದೇಶವಾಸಿಗಳಿಗೆ ನೀಡಲು ಸಾಧ್ಯವಾಗುತ್ತದೆ. ಇದನ್ನು ಮೊದಲು ನಮ್ಮ ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಮುಂಚೂಣಿಯ ಸೇನಾನಿಗಳಿಗೆ ನೀಡಲಿದ್ದೇವೆ ಎಂದು ಹರ್ಷವರ್ಧನ್ ತಿಳಿಸಿದರು.
ಜನವರಿ 2ರಂದು ನಾವು ಸುಮಾರು 125 ಜಿಲ್ಲೆಗಳಲ್ಲಿ ಡ್ರೈ ರನ್ ಹಮ್ಮಿಕೊಂಡಿದ್ದೆವು. ಇಂದು (ಶುಕ್ರವಾರ) ನಾವಿದನ್ನು ಮೊದಲು ಮಾಡಿದ ಮೂರು ರಾಜ್ಯಗಳನ್ನು ಹೊರತುಪಡಿಸಿ ದೇಶದ್ಯಾಂತ ಕೈಗೊಳ್ಳುತ್ತಿದ್ದೇವೆ ಎಂದರು.
ಕೋವಿಡ್-19 ಲಸಿಕೆ ಹಂಚಿಕೆ ಸುಗಮವಾಗಿ ಸಾಗಲು ಮತ್ತು ಅಗತ್ಯ ಬೇಡಿಕೆದಾರರಿಗೆ ತಲುಪಲು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎನ್ಜಿಒಗಳ ಸಹಾಯಕ್ಕೆ ವಿನಂತಿ ಮಾಡಲಾಗಿದೆ ಎಂದವರು ತಿಳಿಸಿದರು.
ಶುಕ್ರವಾರದಂದು ದೇಶದ 33 ರಾಜ್ಯಗಳ 736 ಜಿಲ್ಲೆಗಳಲ್ಲಿ ಕೋವಿಡ್-19 ಲಸಿಕೆ ಹಂಚಿಕೆ ತಾಲೀಮು ಹಮ್ಮಿಕೊಳ್ಳಲಾಗಿದೆ. ಇದರಂತೆ ತಮಿಳುನಾಡಿನ ರಾಜೀವ್ ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪೂರ್ವಾಭ್ಯಾಸವನ್ನು ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.