ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಈಚೆಗೆ ನಡೆದ ಸಂಘರ್ಷವು ‘ಕಾಶ್ಮೀರದಲ್ಲಿನ ಸಂಘರ್ಷ’ ಆಗಿರಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಈ ರೀತಿಯ ವಿವರಣೆಗಳಿಂದ ಪಹಲ್ಗಾಮ್ ದಾಳಿಯ ಸೂತ್ರಧಾರ ಹಾಗೂ ದಾಳಿಯ ಸಂತ್ರಸ್ತರನ್ನು ಒಂದೇ ತಕ್ಕಡಿಯಲ್ಲಿ ಇರಿಸಿದಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯಾನಕ ದಾಳಿಯು ತೀವ್ರ ಸ್ವರೂಪದ ಭೀತಿಯನ್ನು ಸೃಷ್ಟಿಸಿ, ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ವಲಯವನ್ನು ಹಾಳುಮಾಡುವ ಹಾಗೂ ಧಾರ್ಮಿಕ ವೈಷಮ್ಯ ಸೃಷ್ಟಿಸುವ ಉದ್ದೇಶ ಹೊಂದಿತ್ತು ಎಂದು ಅವರು ವಿವರಿಸಿದ್ದಾರೆ.
ವಿದೇಶ ಸಂಬಂಧಗಳ ಕುರಿತ ಜರ್ಮನ್ ಪರಿಷತ್ತಿನ ಜೊತೆ ಬರ್ಲಿನ್ನಲ್ಲಿ ನಡೆಸಿದ ಸಂವಾದದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ‘ಕಾಶ್ಮೀರದಲ್ಲಿನ ಸಂಘರ್ಷದ ಅಂತರರಾಷ್ಟ್ರೀಯ ಪರಿಣಾಮಗಳ’ ಬಗ್ಗೆ ಪ್ರಶ್ನಿಸಿದಾಗ ಜೈಶಂಕರ್ ಅವರು, ‘ಇದು ಕಾಶ್ಮೀರದಲ್ಲಿನ ಸಂಘರ್ಷ ಅಲ್ಲ, ಇದೊಂದು ಭಯೋತ್ಪಾದಕ ದಾಳಿ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
‘ಈ ಮಾದರಿಯ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರವನ್ನು ಮಾತ್ರವೇ ಅಲ್ಲದೆ, ದೇಶದ ಇತರ ಭಾಗಗಳನ್ನೂ ಗುರಿಯಾಗಿಸಿಕೊಂಡು ನಡೆದಿವೆ’ ಎಂದು ಜೈಶಂಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.