ಜೈಪುರ : ‘ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸಲು ಒತ್ತಾಯಿಸುವ ಮೂಲಕ ನಗೆಪಾಟಲಿಗೆ ಗುರಿಯಾಗಬೇಡಿ’ ಎಂದು ಸ್ವತಂತ್ರ ಶಾಸಕ ಸಂಯಮ್ ಲೋಧಾ ಅವರು ಕಾಂಗ್ರೆಸ್ನ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಅವರಿಗೆ ಸಲಹೆ ನೀಡಿದ್ದಾರೆ.
'ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಕುರಿತು ನಾನು ಕಳೆದ ಐದು ವರ್ಷಗಳಿಂದ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿದ್ದೇನೆ ಆಗ ಸಚಿನ್ ಅವರು ನನಗೆ ಬೆಂಬಲ ನೀಡಿಲ್ಲ' ಎಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಸಲಹೆಗಾರರೂ ಆಗಿರುವ ಲೋಧಾ ಅವರು ಹೇಳಿದ್ದಾರೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪ್ರಶ್ನೆಪತ್ರಿಕೆ ಸೋರಿಕೆ (ಸರ್ಕಾರಿ ಹುದ್ದೆಯ ನೇಮಕಾತಿ) ಹಗರಣದ ಕುರಿತು ಕ್ರಮಕ್ಕೆ ಒತ್ತಾಯಿಸಿದ್ದಾಗಲೂ ಸಚಿನ್ ಮತ್ತು ಅವರ ಜೊತೆಗಿರುವವರು ನನಗೆ ಬೆಂಬಲ ನೀಡಿಲ್ಲ’ ಎಂದಿದ್ದಾರೆ.
‘ಇದು ರಾಜಸ್ಥಾನ. ಚುನಾವಣೆ ವರ್ಷದಲ್ಲಿ ನೀವು ಯಾಕೆ ಭ್ರಷ್ಟಾಚಾರ ವಿಷಯನ್ನು ಮುನ್ನಲೆಗೆ ತಂದು ಕ್ರಮಕ್ಕೆ ಒತ್ತಾಯಿಸುತ್ತೀದ್ದೀರಿ ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ’ ಎಂದಿದ್ದಾರೆ.
‘ಸಚಿನ್ ಅವರ ಜನ ಸಂಘರ್ಷ ಯಾತ್ರೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ’ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.