ಕೀವ್: ಪೂರ್ವ ಯೂರೋಪ್ ರಾಷ್ಟ್ರ ಉಕ್ರೇನ್ನಲ್ಲಿ ಉಳಿಯುವುದು ತೀರಾ ಅಗತ್ಯವಲ್ಲದಿದ್ದರೆ, ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳು ಕೂಡಲೇ ಭಾರತಕ್ಕೆ ಹಿಂದಿರುಗಬೇಕು ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾನುವಾರ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಭಾರತೀಯರು ಯಾವುದೇ ವಾಣಿಜ್ಯ ವಿಮಾನ ಅಥವಾ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಹಿಂದಿರುಗಬಹುದು ಎಂದು ಅದು ತಿಳಿಸಿದೆ.
‘ಉಕ್ರೇನ್ನಲ್ಲಿನ ಪರಿಸ್ಥಿತಿ ಉದ್ವಿಗ್ನತೆ ಮತ್ತು ಅನಿಶ್ಚಿತತೆಗಳಿಂದ ಕೂಡಿದೆ. ಹೀಗಾಗಿ ಇಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲ ಎಂದಾದರೆ, ಭಾರತೀಯ ಪ್ರಜೆಗಳು ಮತ್ತು ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ನಿಂದ ಹೊರಹೋಗುವಂತೆ ಸೂಚಿಸಲಾಗುತ್ತಿದೆ’ ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ವಿದ್ಯಾರ್ಥಿಗಳು ಚಾರ್ಟರ್ ಫ್ಲೈಟ್ಗಳ ಮಾಹಿತಿಗಳನ್ನು ಪಡೆಯುವಂತೆಯೂ, ರಾಯಭಾರ ಕಚೇರಿಯ ಫೇಸ್ಬುಕ್, ವೆಬ್ಸೈಟ್ ಮತ್ತು ಟ್ವಿಟರ್ಗಳ ಮೇಲೆ ಗಮನ ಇಟ್ಟಿರುವಂತೆಯೂ ಸೂಚಿಸಲಾಗಿದೆ.
ಮಾಹಿತಿ ಮತ್ತು ಸಹಾಯದ ಅಗತ್ಯವಿರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.
ಉಕ್ರೇನ್ನಲ್ಲಿರುವ ಭಾರತೀಯರಿಗೆ ವಿಮಾನದ ಟಿಕೆಟ್ಗಳು ಸಿಗುತ್ತಿಲ್ಲ ಎಂಬ ಸಂಗತಿ ಈ ವಾರದ ಆರಂಭದಲ್ಲಿ ವರದಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.