ADVERTISEMENT

ಭಾರತಕ್ಕೆ ಕಾಯಂ ಸದಸ್ಯತ್ವ ಸಿಗದಿರುವುದರಿಂದ ವಿಶ್ವಸಂಸ್ಥೆಗೇ ನಷ್ಟ: ಜೈಶಂಕರ್‌

ಪಿಟಿಐ
Published 22 ಸೆಪ್ಟೆಂಬರ್ 2022, 11:03 IST
Last Updated 22 ಸೆಪ್ಟೆಂಬರ್ 2022, 11:03 IST
ಸಚಿವ ಎಸ್‌.ಜೈಶಂಕರ್‌ ಮತ್ತು ಪ್ರಾಧ್ಯಾಪಕ ಅರವಿಂದ್ ಪನಗರಿಯಾ ಅವರು ಸಂವಾದ ನಡೆಸಿದರು–ಪಿಟಿಐ ಚಿತ್ರ 
ಸಚಿವ ಎಸ್‌.ಜೈಶಂಕರ್‌ ಮತ್ತು ಪ್ರಾಧ್ಯಾಪಕ ಅರವಿಂದ್ ಪನಗರಿಯಾ ಅವರು ಸಂವಾದ ನಡೆಸಿದರು–ಪಿಟಿಐ ಚಿತ್ರ    

ನ್ಯೂಯಾರ್ಕ್‌: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗದೇ ಇರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ಮಂಡಳಿಗೇ ನಷ್ಟ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಇಂಟರ್‌ನ್ಯಾಷನಲ್‌ ಆ್ಯಂಡ್‌ ಪಬ್ಲಿಕ್‌ ಅಫೈರ್ಸ್‌ನ ರಾಜ್‌ ಸೆಂಟರ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರೊಂದಿಗೆ ಸಂವಾದ ನಡೆಸಿದರು.

ಭಾರತವು ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಇನ್ನೆಷ್ಟು ವರ್ಷಗಳು ಬೇಕಾಗಬಹುದು ಎಂಬ ಪ್ರಶ್ನೆಗೆ, ‘ಈ ದಿಸೆಯಲ್ಲಿ ನಾವು ಗಂಭೀರ ಪ್ರಯತ್ನ ನಡೆಸುತ್ತಿದ್ದೇವೆ’ ಎಂದಿದ್ದಾರೆ.

ADVERTISEMENT

‘ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಬೇಕೆಂದು ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರುತ್ತಿರುವ ರಾಷ್ಟ್ರಗಳ ಪೈಕಿ ನಾವು ಮುಂಚೂಣಿಯಲ್ಲಿದ್ದೇವೆ. ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಭಾರತವು ಅರ್ಹವಾಗಿದೆ’ ಎಂದು ಹೇಳಿದ್ದಾರೆ.

ರಷ್ಯಾ, ಬ್ರಿಟನ್‌, ಚೀನಾ, ಫ್ರಾನ್ಸ್‌ ಮತ್ತು ಅಮೆರಿಕ ಪ್ರಸ್ತುತ ಕಾಯಂ ಸದಸ್ಯತ್ವ ಪಡೆದಿವೆ. 10 ರಾಷ್ಟ್ರಗಳು ಕಾಯಂ ಅಲ್ಲದ ಸದಸ್ಯತ್ವ ಹೊಂದಿವೆ. ಮಂಡಳಿಯ ಕಾಯಂ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಹಲವು ರಾಷ್ಟ್ರಗಳು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.