ರೇವಂತ್ ರೆಡ್ಡಿ
–ಪಿಟಿಐ ಚಿತ್ರ
ನವದೆಹಲಿ: ಬಿಆರ್ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ಕುರಿತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಇದರ ಬೆನ್ನಲ್ಲೇ ರೇವಂತ್ ರೆಡ್ಡಿ ಅವರು ಇಂದು (ಶುಕ್ರವಾರ) ಸುಪ್ರೀಂ ಕೋರ್ಟ್ಗೆ ಬೇಷರತ್ ಕ್ಷಮೆ ಕೇಳಿದ್ದಾರೆ.
‘ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಅತ್ಯುನ್ನತ ಗೌರವ ಮತ್ತು ಸಂಪೂರ್ಣ ನಂಬಿಕೆ ಇದೆ. ಆಗಸ್ಟ್ 29ರಂದು ಪ್ರಕಟಗೊಂಡ ಕೆಲವು ಪತ್ರಿಕಾ ವರದಿಗಳು ನನಗೆ ಸಂಬಂಧಿಸಿದ ಕಾಮೆಂಟ್ಗಳನ್ನು ಒಳಗೊಂಡಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಜತೆಗೆ, ಗೌರವಾನ್ವಿತ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡಿದೆ. ನಾನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ದೃಢ ನಂಬಿಕೆಯುಳ್ಳವನು ಎಂದು ಪುನರುಚ್ಚರಿಸುತ್ತೇನೆ’ ಎಂದು ರೇವಂತ್ ರೆಡ್ಡಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದೇಶದ ಸಂವಿಧಾನದ ನೀತಿಗಳಲ್ಲಿ ದೃಢ ನಂಬಿಕೆಯುಳ್ಳವನಾಗಿ, ನಾನು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಮುಂದಿನ ದಿನಗಳಲ್ಲೂ ಇದನ್ನೇ ಮುಂದುವರಿಸುತ್ತೇನೆ’ ಎಂದು ರೆಡ್ಡಿ ತಿಳಿಸಿದ್ದಾರೆ.
ಏನಿದು ವಿವಾದ?
ಬಿಆರ್ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರಿಗೆ ಜಾಮೀನು ಕುರಿತು ಪ್ರತಿಕ್ರಿಯಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ಜಾಮೀನು ಪಡೆಯಲು ಬಿಜೆಪಿ ಮತ್ತು ಬಿಆರ್ಎಸ್ ನಡುವಿನ ಸಂಧಾನ ಕಾರಣವಾಗಿರಬಹುದು ಎಂದು ಹೇಳಿಕೆ ನೀಡಿದ್ದರು. ರೇವಂತ ರೆಡ್ಡಿ ಅವರ ಹೇಳಿಕೆಗೆ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ‘ಇಂತಹ ಹೇಳಿಕೆಗಳು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಮೂಡಿಸುತ್ತವೆ’ ಎಂದು ಅಭಿಪ್ರಾಯಪಟ್ಟಿತ್ತು.
‘ಸುದ್ದಿಪತ್ರಿಕೆಗಳಲ್ಲಿ ಅವರ ಹೇಳಿಕೆ ಓದಿದ್ದೀರಾ? ಒಮ್ಮೆ ಓದಿ. ಜವಾಬ್ದಾರಿಯುತ ಮುಖ್ಯಮಂತ್ರಿಯಿಂದ ಇದೆಂತಹ ಹೇಳಿಕೆ? ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಹೀಗೆ ಮಾತನಾಡುತ್ತಾರಾ’ ಎಂದು ಪ್ರಶ್ನಿಸಿತ್ತು.
‘ರಾಜಕೀಯ ವಿರೋಧಗಳಿಗಾಗಿ ಕೋರ್ಟ್ ಅನ್ನು ಏಕೆ ಎಳೆಯುತ್ತೀರಿ. ರಾಜಕೀಯ ಪಕ್ಷಗಳ ಜೊತೆ ಚರ್ಚಿಸಿ ನಾವು ಆದೇಶವನ್ನು ನಿಡುತ್ತೇವಾ? ರಾಜಕಾರಣಿಗಳು ಅಥವಾ ಇನ್ಯಾರಾದರೂ ಕೋರ್ಟ್ ಆದೇಶಗಳನ್ನು ಟೀಕಿಸಿದರೆ, ಆ ಕುರಿತು ನಾವು ಕೆಡಿಸಿಕೊಳ್ಳುವುದಿಲ್ಲ. ಆತ್ಮಸಾಕ್ಷಿ ಮತ್ತು ಪ್ರತಿಜ್ಞಾವಿಧಿಗೆ ಅನುಸಾರವಾಗಿ ಮಾತ್ರ ಕರ್ತವ್ಯ ನಿಭಾಯಿಸುತ್ತೇವೆ’ ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಮೂವರು ಸದಸ್ಯರಿದ್ದ ಪೀಠವು ರೇವಂತ ರೆಡ್ಡಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಮುಕುಲ್ ರೋಹಟಗಿ ಅವರಿಗೆ ಹೇಳಿತ್ತು.
‘ಮನೀಶ್ ಸಿಸೋಡಿಯಾ ಅವರಿಗೆ 15 ತಿಂಗಳ ಬಳಿಕ ಸಿಕ್ಕ ಜಾಮೀನು, ಕವಿತಾ ಅವರಿಗೆ ಐದೇ ತಿಂಗಳಲ್ಲಿ ಸಿಕ್ಕಿದೆ. ಈ ಬಗ್ಗೆ ಅನುಮಾನಗಳಿವೆ. ಬಿಆರ್ಎಸ್ ಮತ್ತು ಬಿಜೆಪಿ ಜೊತೆಗಿನ ಸಂಧಾನದ ಫಲವಾಗಿಯೇ ಈಗ ಜಾಮೀನು ಸಿಕ್ಕಿರಬಹುದು’ ಎಂದು ರೇವಂತ ರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದರು.
ಸಂಸ್ಥೆಗಳನ್ನು ಕುರಿತಂತೆ ಪರಸ್ಪರ ಗೌರವವನ್ನು ಹೊಂದುವುದು ಮತ್ತು ನಿರ್ದಿಷ್ಟ ಅಂತರವನ್ನು ಕಾಯ್ದು ಕೊಳ್ಳುವುದು ಮೂಲಭೂತವಾದ ಹೊಣೆಗಾರಿಕೆ ಕರ್ತವ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.