ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿಯ ತುಲೈಲ್ ಸೆಕ್ಟರ್ನಲ್ಲಿ ಶುಕ್ರವಾರ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡು ಸಹ ಪೈಲಟ್ ಸಾವನ್ನಪ್ಪಿದ್ದಾರೆ.
ಮೇಜರ್ ಸಂಕಲ್ಪ್ ಯಾದವ್ (29) ಮೃತಪಟ್ಟ ಸಹ ಪೈಲಟ್. ಗಂಭೀರವಾಗಿ ಗಾಯಗೊಂಡಿರುವ ಪೈಲಟ್ ಉಧಂಪುರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಸ್ತಾನದ ಜೈಪುರ ನಿವಾಸಿಯಾದ ಮೇಜರ್ ಸಂಕಲ್ಪ ಯಾದವ್ ಅವರು 2015ರಲ್ಲಿ ಸೇವೆಗೆ ಸೇರಿದ್ದರು.
‘ಅನಾರೋಗ್ಯ ಪೀಡಿತ ಯೋಧರೊಬ್ಬರನ್ನು ಕರೆತರುವ ಸಲುವಾಗಿ ತೆರಳುತ್ತಿದ್ದ ವೇಳೆ ತುಲೈಲ್ ಸೆಕ್ಟರ್ನ ಬರೂಬ್ ಪ್ರದೇಶದ ಗುಜ್ರಾನ್ ಎಂಬಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಡಿದುಕೊಂಡಿತು. ತಕ್ಷಣ ರಕ್ಷಣಾ ಹೆಲಿಕಾಪ್ಟರ್ ಬಳಸಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಹಿಮಚ್ಛಾದಿತ ಗುಜ್ರಾನ್ ನಲ್ಹಾ ಪ್ರದೇಶದಲ್ಲಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅವಶೇಷಗಳು ಪತ್ತೆಯಾಯಿತು. ಪೈಲಟ್ ಹಾಗೂ ಸಹ ಪೈಲಟ್ ಅವರನ್ನು ತಕ್ಷಣವೇ ಉಧಂಪುರದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡಿದ್ದ ಸಂಕಲ್ಪ ಯಾದವ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಮತ್ತೊಬ್ಬ ಗಾಯಾಳು ಸ್ಥಿತಿ ಚಿಂತಾಜನಕವಾಗಿದೆ’ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಎಮ್ರಾನ್ ಮುಸಾಗಿ ತಿಳಿಸಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಇಲ್ಲಿನ ಉಧಂಪುರ ಜಿಲ್ಲೆಯ ಶಿವಧಾರಾ ಬೆಟ್ಟದಲ್ಲಿ ಸೇನಾ ಹೆಲಿಕಾಪ್ಟರ್ ಭೂಸ್ಪರ್ಶ ಮಾಡುವಾಗ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.