ADVERTISEMENT

ಕುಲಭೂಷಣ್ ಜಾಧವ್ ಮೇಲೆ ಪಾಕ್‌ನಿಂದ ವಿಪರೀತ ಒತ್ತಡ: ವಿದೇಶಾಂಗ ಇಲಾಖೆ

ಇದೇ ಮೊದಲ ಬಾರಿ ರಾಜತಾಂತ್ರಿಕರಿಂದ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 3:45 IST
Last Updated 3 ಸೆಪ್ಟೆಂಬರ್ 2019, 3:45 IST
   

ಇಸ್ಲಾಮಾಬಾದ್/ನವದೆಹಲಿ:ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ವಿಪರೀತ ಒತ್ತಡಕ್ಕೊಳಗಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಇಸ್ಲಾಮಾಬಾದ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಗೌರವ್ ಅಹ್ಲುವಾಲಿಯಾ ಅವರು ಜಾಧವ್‌ರನ್ನು ಸೋಮವಾರ ಭೇಟಿ ಮಾಡಿದ್ದಾರೆ.2016ರಲ್ಲಿ ಜಾಧವ್ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಅದಾದ ನಂತರ ಇದೇ ಮೊದಲ ಬಾರಿ ರಾಜತಾಂತ್ರಿಕರ ಭೇಟಿಗೆ ಅವಕಾಶ ದೊರೆತಿದೆ. ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನದ ಹಿನ್ನೆಲೆಯಲ್ಲಿ ರಾಜತಾಂತರಿಕರ ಭೇಟಿಗೆ ಪಾಕಿಸ್ತಾನ ಅವಕಾಶ ನೀಡಿದೆ.

‘ಪಾಕಿಸ್ತಾನದ ಸುಳ್ಳು ಪ್ರತಿಪಾದನೆಗಳಿಂದಾಗಿ ಜಾಧವ್ ಅವರು ವಿಪರೀತ ಒತ್ತಡಕ್ಕೊಳಗಾಗಿದ್ದಾರೆ. ಸಮಗ್ರ ವರದಿಗಾಗಿ ನಾವು ಎದುರುನೋಡುತ್ತಿದ್ದೇವೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

‘ವಿಸ್ತೃತ ವರದಿ ದೊರೆತ ಬಳಿಕ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ. ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ವಿಯೆನ್ನಾ ಒಪ್ಪಂದ, ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಹಾಗೂ ಪಾಕಿಸ್ತಾನದ ಕಾನೂನಿಗೆ ಅನುಗುಣವಾಗಿ ರಾಜತಾಂತ್ರಿಕರ ಭೇಟಿಗೆ ಅನುವು ಮಾಡಿಕೊಡಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್‌ ಫೈಸಲ್‌ ಭಾನುವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.