ಪುಣೆ: ‘ದಿ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿ’ ಎನ್ನುವ ಸಂಸ್ಥೆಯು ಅಂತರ್ಜಾತಿ ಮತ್ತು ಅಂತರ ಧರ್ಮೀಯ ಮದುವೆ ಆಗುವವರಿಗಾಗಿ ‘ವಧು–ವರರ ಕೇಂದ್ರ’ವನ್ನು ಆರಂಭಿಸಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಕೇಂದ್ರ ತೆರೆಯಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
‘ಸಮಾಜದಲ್ಲಿ ವೈಚಾರಿಕತೆ ಮತ್ತು ಸಮಾನತೆಯನ್ನು ಪ್ರೋತ್ಸಾಹಿಸುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಇದಕ್ಕಾಗಿಯೇ ಇಂಥ ಕೇಂದ್ರವೊಂದನ್ನು ಆರಂಭಿಸುವುದು ನಮ್ಮ ಬಹುಕಾಲದ ಆಕಾಂಕ್ಷೆಯಾಗಿತ್ತು. ಈ ಸೇವೆಯು ಸಂಪೂರ್ಣ ಉಚಿತವಾಗಿರಲಿದೆ’ ಎಂದು ಸಂಸ್ಥೆಯ ಸದಸ್ಯ ಹಮೀದ್ ದಾಬೋಲ್ಕರ್ ತಿಳಿಸಿದರು. ಇವರು ವಿಚಾರವಾದಿ ಡಾ. ನರೇಂದ್ರ ದಾಬೋಲ್ಕರ್ ಅವರ ಮಗ.
‘ನಮ್ಮ ಕೇಂದ್ರದಲ್ಲಿ ಹೆಸರು ನಮೂದಿಸಿಕೊಳ್ಳಿ’ ಎಂದು ಸಂಸ್ಥೆಯ ಸದಸ್ಯರಾದ ಶಂಕರ್ ಕಣಸೆ ಮತ್ತು ಡಾ. ದ್ಯಾನ್ದೇವ್ ಸರ್ವಡೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ‘ವಿಧವೆಯರು ಮತ್ತು ವಿಧುರರೂ ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದರು.
‘ಪರಸ್ಪರರ ಇಚ್ಛೆಯ ಅನುಸಾರ ಸಂಗಾತಿಯನ್ನು ಹುಡುಕಲು ಸಹಕಾರ ನೀಡಲಾಗುತ್ತದೆ. ವ್ಯಕ್ತಿಗಳ ಹಿನ್ನೆಲೆ ಕುರಿತು ಸೂಕ್ತ ಪರಿಶೀಲನೆಯನ್ನೂ ನಡೆಸಲಾಗುವುದು. ವಿಶೇಷ ವಿವಾಹ ಕಾಯ್ದೆ ಅಥವಾ ಸತ್ಯಶೋಧಕ ಆಚರಣೆಗಳ ಮೂಲಕ ವಿವಾಹವಾಗಲು ಉತ್ತೇಜನ ನೀಡಲಾಗುವುದು’ ಎಂದು ಶಂಕರ್ ಕಣಸೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.