ADVERTISEMENT

ಹಿಂಸಾಚಾರ ತಡೆಯಲು ದೆಹಲಿಯ ಗಡಿಭಾಗಗಳಲ್ಲಿ ಇಂಟರ್‌ನೆಟ್ ಸ್ಥಗಿತ: ಕೇಂದ್ರ ಸ್ಪಷ್ಟನೆ

ಏಜೆನ್ಸೀಸ್
Published 4 ಫೆಬ್ರುವರಿ 2021, 16:00 IST
Last Updated 4 ಫೆಬ್ರುವರಿ 2021, 16:00 IST
ದೆಹಲಿಯ ಕೆಂಪು ಕೋಟೆಯ ಮೇಲೆ ನಡೆದ ದಾಳಿ
ದೆಹಲಿಯ ಕೆಂಪು ಕೋಟೆಯ ಮೇಲೆ ನಡೆದ ದಾಳಿ   

ನವದೆಹಲಿ: ಹಿಂಸಾಚಾರವನ್ನು ತಡೆಗಟ್ಟಲು ದೆಹಲಿಯ ಗಡಿ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಕಡಿತಗೊಳಿಸಲಾಯಿತು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ವಿಚಾರವಾಗಿ ಗುರುವಾರ ಮಾತನಾಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್‌, 'ದೆಹಲಿ ಗಡಿ ಪ್ರದೇಶಗಳಲ್ಲಿ ಮತ್ತಷ್ಟು ಹಿಂಸಾಚಾರ ನಡೆಯುವುದನ್ನು ತಡೆಗಟ್ಟಲು ಇಂಟರ್‌ನೆಟ್‌ ಸೇವೆಯನ್ನು ಕಡಿತಗೊಳಿಸಬೇಕಾಯಿತು' ಎಂದು ಹೇಳಿದ್ದಾರೆ.

'ಜನವರಿ 06ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಮತ್ತು ಜನವರಿ 26ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ನಡೆದ ದಾಳಿಯು ಎರಡು ದೇಶಗಳಲ್ಲಿ ಒಂದೇ ತೆರನಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿವೆ. ಭಾರತ ಮತ್ತು ಅಮೆರಿಕವು ಸಮಾನ ಮೌಲ್ಯಗಳನ್ನು ಹೊಂದಿರುವ ಪ್ರಜಾಪ್ರಭುತ್ವಗಳಾಗಿವೆ' ಎಂದು ಅನುರಾಗ್ ಶ್ರೀವಾಸ್ತವ್‌ ತಿಳಿಸಿದ್ದಾರೆ.

ADVERTISEMENT

ದೆಹಲಿಯ ಟಿಕ್ರಿ, ಸಿಂಘು ಮತ್ತು ಘಾಜಿಪುರ್‌ ಗಡಿ ಪ್ರದೇಶಗಳಲ್ಲಿ ಜನವರಿ 29ರ ರಾತ್ರಿ 11ರಿಂದ ಜನವರಿ 31ರ ರಾತ್ರಿ 11ರ ವರೆಗೂ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿತ್ತು. ಈ ಕ್ರಮವನ್ನು ಫೆಬ್ರವರಿ 2ರ ರಾತ್ರಿ 11 ಗಂಟೆ ವರೆಗೆ ವಿಸ್ತರಿಸಲಾಗಿತ್ತು.

ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಕೋರಿ ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.