ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಕ್ಕಾಗಿ ಎನ್ಸಿಪಿ ಮುಖಂಡ ಅಜಿತ್ ಪವಾರ್ ಅವರೇ ತಮ್ಮನ್ನು ಸಂಪರ್ಕಿಸಿದ್ದರು ಎಂದು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
‘ಬಿಜೆಪಿಯ ಜತೆ ಕೈಜೋಡಿಸಲು ಬಯಸಿದ್ದ ಶಾಸಕರ ಜತೆಗೆ ನನ್ನನ್ನು ಅವರು ಮಾತನಾಡಿಸಿದ್ದರು.ಬಿಜೆಪಿಯನ್ನು ಬೆಂಬಲಿಸುವ ವಿಚಾರವನ್ನು ಶರದ್ ಪವಾರ್ (ಎನ್ಸಿಪಿ ಮುಖ್ಯಸ್ಥ) ಜತೆಗೆ ಚರ್ಚಿಸಿದ್ದಾಗಿ ಅಜಿತ್ ನನಗೆ ಹೇಳಿದ್ದರು’ ಎಂದೂ ತಿಳಿಸಿದ್ದಾರೆ.
‘ಕಾಂಗ್ರೆಸ್ ಜತೆಗೆ ಹೋಗಿ ಸರ್ಕಾರ ರಚಿಸುವುದನ್ನು ಎನ್ಸಿಪಿ ಬಯಸುವುದಿಲ್ಲ. ಮೂರು ಪಕ್ಷಗಳ ಸರ್ಕಾರ ಸ್ಥಿರವಾಗಿರುವುದು ಸಾಧ್ಯವಿಲ್ಲ. ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಜತೆ ಸೇರಲು ಸಿದ್ಧ ಎಂದು ಅಜಿತ್ ಹೇಳಿದ್ದರು’ ಎಂದು ಫಡಣವೀಸ್ ಹೇಳಿದ್ದಾರೆ.
ಶಿವಸೇನಾ ನೇತೃತ್ವದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸರ್ಕಾರ ರಚಿಸುವ ಮಾತುಕತೆ ಅಂತಿಮ ಹಂತದಲ್ಲಿದ್ದಾಗಲೇ ನ. 23ರಂದು ಫಡಣವೀಸ್ ಮುಖ್ಯಮಂತ್ರಿಯಾಗಿ ಮತ್ತು ಅಜಿತ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಸರ್ಕಾರ 80 ತಾಸು ಅಸ್ತಿತ್ವದಲ್ಲಿತ್ತು. ಈ ಪ್ರಯತ್ನವು ತಿರುಗುಬಾಣವಾಯಿತು ಎಂದು ಅವರು ಒಪ್ಪಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.