ಬೆಂಗಳೂರು: ಲಸಿಕೆ ಪಡೆದರೆ ಜನ ಶಕ್ತಿಹೀನರಾಗುತ್ತಾರೆ ಎಂಬ ವಾದಗಳೆಲ್ಲವೂ ಅಸಂಬದ್ಧ ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ವಿ.ಜಿ ಸೋಮನಿ ಹೇಳಿದ್ದಾರೆ.
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಗಳ ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಭಾನುವಾರ ಅನುಮೋದನೆ ನೀಡಿದೆ. ಲಸಿಕೆಗಳ ಅಣಕು ಕಾರ್ಯಾಚರಣೆಯೂ ನಡೆಯುತ್ತಿದೆ.
ಈ ಮಧ್ಯೆ ಲಸಿಕೆ ಪಡೆದರೆ ಜನಶಕ್ತಿಹೀನರಾಗುತ್ತಾರೆಎಂಬ ವಾದಗಳ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಡಿಸಿಜಿಐ, 'ಕಿಂಚಿತ್ತು ಅಸುರಕ್ಷಿತ ಎನಿಸುವ ಯಾವುದಕ್ಕೂ ನಾನು ಒಪ್ಪಿಗೆ ನೀಡಲಾರೆ. ಲಸಿಕೆಗಳು ಶೇ. 110ರಷ್ಟು ಸುರಕ್ಷಿತ. ಯಾವುದೇ ಲಸಿಕೆ ಪಡೆದರೂ ಸಣ್ಣ ಜ್ವರ, ನೋವು, ಅಲರ್ಜಿ ಆಗುವುದು ಸಾಮಾನ್ಯ. ಇವೆಲ್ಲವೂ ( ಲಸಿಕೆ ಪಡೆದ ಜನಶಕ್ತಿಹೀನರಾಗುತ್ತಾರೆ ಎಂಬುದು) ಅಸಂಬದ್ಧ,' ಎಂದು ವಿ.ಜಿ ಸೋಮನಿ ಹೇಳಿದ್ದಾರೆ.
ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ವಿವರ
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇನ್ನೊಂದೆಡೆ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಸಿದೆ.
ಕ್ಯಾಡಿಲಾ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್
ತಜ್ಞರ ಸಮಿತಿ ಶಿಫಾರಸಿನಂತೆ 26,000 ಭಾರತೀಯರಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಕ್ಯಾಡಿಲಾ ಹೆಲ್ತ್ಕೇರ್ ಅನುಮತಿ ಕೋರಿದೆ. ಒಂದನೇ ಹಾಗೂ ಎರಡನೇ ಹಂತದ ಪ್ರಯೋಗದಲ್ಲಿ ಈ ಲಸಿಕೆಯು ಸುರಕ್ಷಿತವಾಗಿದೆ ಎಂದು ಮಧ್ಯಂತರ ಅಂಕಿಅಂಶವು ಸೂಚಿಸುತ್ತಿದೆ ಎಂದು ಡಿಸಿಜಿಐ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.