ADVERTISEMENT

ಫ್ರಾಂಕೊ ಮುಲ್ಲಕಲ್ ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿ ನಿಗೂಢ ಸಾವು?

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 9:34 IST
Last Updated 22 ಅಕ್ಟೋಬರ್ 2018, 9:34 IST
ಪಾದ್ರಿ ಕುರಿಯಾಕೋಸ್ ಕಾಟ್ಟುತ್ತರ
ಪಾದ್ರಿ ಕುರಿಯಾಕೋಸ್ ಕಾಟ್ಟುತ್ತರ   

ಆಲಪ್ಪುಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಬಿಷಪ್‌ ಫ್ರಾಂಕೊ ಮುಲ್ಲಕಲ್ ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿ ಕುರಿಯಾಕೋಸ್ ಕಾಟ್ಟುತ್ತರ ಎಂಬವರು ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾರೆ.

ಜಲಂಧರ್ ಬಳಿ ದಸ್ವಾ ಚರ್ಚ್ ನ ಕೋಣೆಯೊಂದರಲ್ಲಿ ಸೋಮವಾರ ಬೆಳಗ್ಗೆ ಕುರಿಯಾಕೋಸ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಸಾವಿನ ಬಗ್ಗೆ ಶಂಕೆ ಇದೆ ಎಂದು ಕುರಿಯಾಕೋಸ್ ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಆದರೆ ಕುರಿಯಾಕೋಸ್ ಹೃದಯಸ್ತಂಭನದಿಂದ ಸಾವಿಗೀಡಾಗಿದ್ದಾರೆ ಎಂದು ಜಲಂಧರ್ ಚರ್ಚ್ ನ ಅಧಿಕಾರಿಗಳು ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ. ಸಂಬಂಧಿಕರು ಜಲಂಧರ್ತಲುಪಿದ ನಂತರವೇ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಪಂಜಾಬ್ ಪೊಲೀಸರಿಗೆ ಒತ್ತಾಯಿಸಲಾಗಿದೆ.

ಭಾನುವಾರ ಮಧ್ಯಾಹ್ನದ ಊಟ ಮುಗಿಸಿ ಕೋಣೆಗೆ ಹೋಗಿದ್ದ ಅವರು ಅಲ್ಲಿಂದ ಹೊರಗೆ ಬಂದಿರಲಿಲ್ಲ.ಸೋಮವಾರ ಬೆಳಗ್ಗೆ ಪ್ರಾರ್ಥನೆ ವೇಳೆ ಪಾದ್ರಿಯನ್ನು ಕಾಣದೇ ಇದ್ದಾಗ ಕೆಲಸದವರು ಬಂದು ಬಾಗಿಲು ತಟ್ಟಿದ್ದಾರೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಲಭಿಸದೇ ಇದ್ದಾಗ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ, ಈಗ ಮೃತದೇಹವನ್ನು ದಸ್ವಾ ಆಸ್ಪತ್ರೆಯಲ್ಲಿರಿಸಲಾಗಿದೆ.
ಫಾದರ್ ಕುರಿಯಾಕೋಸ್ ಅವರಿಗೆ ಆರೋಗ್ಯ ಸಮಸ್ಯೆ ಇತ್ತುಎಂಬ ಸುದ್ದಿಯೂ ಇದೆ.ಫ್ರಾಂಕೊ ಮುಲ್ಲಕಲ್ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಕುರಿಯಾಕೋಸ್ ಅವರಿಗೆ ಬೆದರಿಕೆ ಇತ್ತು ಎಂದು ಅವರ ಸಹೋದರ ಜೋಸ್ ಕಾಟ್ಟುತ್ತರ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.