ADVERTISEMENT

ಕೋಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ–ಕುಮಾರಸ್ವಾಮಿ ಸಭೆ; ರಾಜಕೀಯ ವಿದ್ಯಮಾನಗಳ ಚರ್ಚೆ

ಪಿಟಿಐ
Published 24 ಮಾರ್ಚ್ 2023, 13:17 IST
Last Updated 24 ಮಾರ್ಚ್ 2023, 13:17 IST
ಮಮತಾ ಬ್ಯಾನರ್ಜಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ
ಮಮತಾ ಬ್ಯಾನರ್ಜಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ   

ಕೋಲ್ಕತ್ತ: ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತದಲ್ಲಿ ಇಂದು (ಶುಕ್ರವಾರ) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರು ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಸಂಜೆ 4.50ಕ್ಕೆ ತೆರಳಿದರು.

ಕರ್ನಾಟಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಮತಾ ಬ್ಯಾನರ್ಜಿ ಅವರೊಂದಿಗೆ, ಪ್ರಸ್ತುತ ರಾಜಕೀಯ ಸ್ಥಿತಿಗತಿ, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮೂಲಗಳು ತಿಳಿಸಿವೆ.

ADVERTISEMENT

'ಕರ್ನಾಟಕದ ಮಾಜಿ ಸಿಎಂ ಹಾಗೂ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅವರು ಗೌರವಾನ್ವಿತ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಇಂದು ಕೋಲ್ಕತ್ತದಲ್ಲಿ ಭೇಟಿಯಾದರು' ಎಂದು ಟಿಎಂಸಿ ಟ್ವೀಟ್ ಮಾಡಿದೆ.

ಟಿಎಂಸಿ ಮೂಲಗಳ ಪ್ರಕಾರ, ಬಿಜೆಪಿಯೇತರ ಮತ್ತು ಕಾಂಗ್ರೆಸ್‌ಯೇತರ ನಾಯಕರೊಂದಿಗಿನ ಸಭೆಯು ವಿರೋಧ ಪಕ್ಷಗಳ ಒಗ್ಗಟ್ಟು ಹಾಗೂ ಪ್ರಾದೇಶಿಕ ಶಕ್ತಿ ವೃದ್ಧಿಸುವ ಪಕ್ಷದ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ.

ರಾಹುಲ್‌ ಅನರ್ಹತೆ ರಾಜಕೀಯ ದ್ವೇಷ: ಕುಮಾರಸ್ವಾಮಿ
ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು 'ಬಿಜೆಪಿಯ ರಾಜಕೀಯ ದ್ವೇಷ' ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

'ಮೋದಿ ಉಪನಾಮ' ಕುರಿತಂತೆ 2019ರಲ್ಲಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಹುಲ್‌ ಗಾಂಧಿ ತಪ್ಪಿತಸ್ಥರು ಎಂದು ಸೂರತ್‌ ನ್ಯಾಯಾಲಯ ಗುರುವಾರವಷ್ಟೇ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು (ಶುಕ್ರವಾರ) ಲೋಕಸಭೆ ಕಾರ್ಯದರ್ಶಿ ಅವರು, ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.