ಪಟ್ನಾ: ಎನ್ಡಿಎ ಮೇಲೆ ನಂಬಿಕೆ ಇರಿಸಿ, ನಾಲ್ಕನೇ ಬಾರಿಗೆ ಅಧಿಕಾರ ನೀಡಿದ ಜನರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸುಶೀಲ್ ಮೋದಿ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, 'ಎನ್ಡಿಎ ಮೇಲೆ ನಂಬಿಕೆ ಇರಿಸಿ, ನಾಲ್ಕನೇ ಬಾರಿಗೆ ಅಧಿಕಾರ ನೀಡಿದ ಜನರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ. ಇದು ಸಾಮಾನ್ಯ ವಿಚಾರವಲ್ಲ. ಭಾರತದ ರಾಜಕಾರಣದಲ್ಲಿ ನಾಲ್ಕನೇ ಬಾರಿಗೆ ಜನರ ನಂಬಿಕೆ ಗಳಿಸಿ ಮುಖ್ಯಮಂತ್ರಿಯಾಗಿರುವವರು ಬಹಳ ಕಡಿಮೆ. ಜನರು ಮತ್ತೆ ಎನ್ಡಿಎಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ' ಎಂದು ತಿಳಿಸಿದ್ದಾರೆ.
'ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಇಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗೆದ್ದಿದ್ದಾರೆ ಎನ್ನುವುದು ಅಪ್ರಸ್ತುತ. ಜನರು ಎನ್ಡಿಎಗೆ ಮತ ಹಾಕಿದ್ದಾರೆ. ಜೆಡಿಯುನ ಗೆಲುವಿನಲ್ಲಿ ಬಿಜೆಪಿ ಪಾತ್ರವಹಿಸಿದೆ ಮತ್ತು ಬಿಜೆಪಿಯ ವಿಜಯದಲ್ಲಿ ಜೆಡಿಯು ಪಾತ್ರವಹಿಸಿದೆ. ಜೆಡಿಯು, ಬಿಜೆಪಿ, ವಿಐಪಿ ಮತ್ತು ಎಚ್ಎಎಂ ಒಟ್ಟಾಗಿ ಕೆಲಸ ಮಾಡಿದ್ದೇವೆ' ಎಂದು ಸುಶೀಲ್ ಮೋದಿ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ನೇತೃತ್ವದ ಎನ್ಡಿಎ 125 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ. ಆರ್ಜೆಡಿ ನೇತೃತ್ವದ ಮಹಾಗಠಬಂಧನ 110 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.