ADVERTISEMENT

ಜಾರ್ಖಂಡ್‌ನಲ್ಲಿ ಪತನಗೊಂಡ ಏರ್‌ ಆಂಬುಲೆನ್ಸ್‌ನಲ್ಲಿ ಕಪ್ಪು ಪೆಟ್ಟಿಗೆಯೇ ಇರಲಿಲ್ಲ!

ಪಿಟಿಐ
Published 26 ಫೆಬ್ರುವರಿ 2026, 3:10 IST
Last Updated 26 ಫೆಬ್ರುವರಿ 2026, 3:10 IST
<div class="paragraphs"><p>ಜಾರ್ಖಂಡ್‌ನಲ್ಲಿ ಅಪಘಾತಕ್ಕೀಡಾದ&nbsp;ಏರ್‌ ಆಂಬುಲೆನ್ಸ್‌</p></div>

ಜಾರ್ಖಂಡ್‌ನಲ್ಲಿ ಅಪಘಾತಕ್ಕೀಡಾದ ಏರ್‌ ಆಂಬುಲೆನ್ಸ್‌

   

ಕೃಪೆ: ಪಿಟಿಐ

ರಾಂಚಿ: ಜಾರ್ಖಂಡ್‌ನಲ್ಲಿ ಸೋಮವಾರ ಅಪಘಾತಕ್ಕೀಡಾದ ಏರ್‌ ಆಂಬುಲೆನ್ಸ್‌ನಲ್ಲಿ ಕಾಕ್‌ಪಿಟ್ ಧ್ವನಿ, ವಿಮಾನ ಹಾರಾಟದ ದತ್ತಾಂಶ ರೆಕಾರ್ಡರ್‌ ಇರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಿಳಿಸಿದೆ.

ADVERTISEMENT

ರಾಂಚಿ – ದೆಹಲಿ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ರೆಡ್‌ಬರ್ಡ್‌ ಏರ್‌ವೇಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ 'ಬೀಚ್‌ಕ್ರಾಫ್ಟ್‌ ಸಿ90ಎ' ವಿಮಾನವು, ರಾಂಚಿ ವಿಮಾನ ನಿಲ್ದಾಣದಿಂದ ಸೋಮವಾರ ಸಂಜೆ 7.11ಕ್ಕೆ ಟೇಕ್‌ ಆಫ್‌ ಆಗಿದ್ದ ವಿಮಾನ, 20 ನಿಮಿಷಗಳ ಬಳಿಕ ಅಂದರೆ 7.30ರ ವೇಳೆಗೆ ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಜತೆಗಿನ ಸಂಪರ್ಕ ಕಳೆದುಕೊಂಡಿತ್ತು.

ಸ್ವಲ್ಪ ಹೊತ್ತಿಗೆ, ಚತ್ರಾ ಜಿಲ್ಲೆಯ ಸಿಮಾರಿಯಾ ಬಳಿ ಪತನಗೊಂಡಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು, ರೋಗಿ ಸೇರಿದಂತೆ ವಿಮಾನದಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದರು. 

ವಿಮಾನವು ಬ್ಲ್ಯಾಕ್‌ ಬಾಕ್ಸ್‌ (ಕಪ್ಪು ಪೆಟ್ಟಿಗೆ) ಅಥವಾ ಕಾಕ್‌ಪಿಟ್ ಧ್ವನಿ, ಹಾರಾಟದ ದತ್ತಾಂಶ ರೆಕಾರ್ಡರ್‌ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದರೆ, ಬೀಚ್‌ಕ್ರಾಫ್ಟ್ C90A ವಿಮಾನವು 40 ವರ್ಷ ಹಳೆಯದಾಗಿದ್ದು, ಆಗ ಜಾರಿಯಲ್ಲಿದ್ದ ನಿಯಮಗಳ ಅನುಸಾರ 1987ರಲ್ಲಿ ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರವನ್ನು ನೀಡಲಾಗಿತ್ತು.

ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರಕ್ಕೆ 2027ರ ಜನವರಿ 20ರವರೆಗೂ ಮಾನ್ಯತೆ ಇದೆ. ಆದಾಗ್ಯೂ, 2016ರ ಜನವರಿ 1ಕ್ಕೂ ಮುನ್ನ ಅಥವಾ ನಂತರ ಈ ಪ್ರಮಾಣಪತ್ರ ಪಡೆದ ವಿಮಾನಗಳೂ ಕಪ್ಪು ಪೆಟ್ಟಿಗೆಯನ್ನು ಹೊಂದುವುದು ಕಡ್ಡಾಯ ಎಂಬ ಆದೇಶ ಮಾಡಲಾಗಿತ್ತು.

ಮೃತರನ್ನು, ಕ್ಯಾ. ವಿವೇಕ್ ವಿಕಾಸ್ ಭಗತ್, ಕ್ಯಾ. ಸವ್ರಜ್‌ದೀಪ್ ಸಿಂಗ್, ರೋಗಿ ಸಂಜಯ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ವೈದ್ಯಕೀಯ ಸಿಬ್ಬಂದಿ ಸಚಿನ್ ಕುಮಾರ್ ಮಿಶ್ರಾ ಮತ್ತು ಸಹಾಯಕರಾದ ಅರ್ಚನಾ ದೇವಿ, ಧುರು ಕುಮಾರ್ ಎಂದು ಗುರುತಿಸಲಾಗಿದೆ.

ಪ್ರತಿಕೂಲ ಹವಾಮಾನದಿಂದ ವಿಮಾನ ಪತನಗೊಂಡಿರಬಹುದು. ವಿವರವಾದ ತನಿಖೆಯ ಬಳಿಕ ಪತನದ ನಿಖರ ಕಾರಣ ತಿಳಿಯಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್‌ ಕುಮಾರ್‌ ಸೋಮವಾರ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.