ADVERTISEMENT

‘ದಕ್ಷಿಣ ಭಾರತದಲ್ಲಿ ಉಗ್ರರ ನೆಲೆ ವಿಸ್ತರಣೆ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 20:20 IST
Last Updated 26 ಮೇ 2019, 20:20 IST
   

ಗುವಾಹಟಿ: ಇಸ್ಲಾಮಿಕ್‌ ಉಗ್ರ ಸಂಘಟನೆ ಜಮಾತ್‌– ಉಲ್‌– ಮುಜಾಹಿದ್ದೀನ್‌ ಬಾಂಗ್ಲಾದೇಶ (ಜೆಎಂಬಿ) ಭಾರತ– ಬಾಂಗ್ಲಾದೇಶ ಗಡಿಯಲ್ಲಿ ಶಾಶ್ವತ ನೆಲೆ ಸ್ಥಾಪಿಸಲು ಹಾಗೂ ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಿಕೊಂಡು ಭಾರತ ಉಪಖಂಡದಲ್ಲಿ ಇಸ್ಲಾಮಿಕ್‌ ಪ್ರಾಂತ್ಯ ಸ್ಥಾಪಿಸುವ ಯೋಜನೆ ಹೊಂದಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

‘ಭಾರತ– ಬಾಂಗ್ಲಾದೇಶ ಗಡಿಯ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳ ಗಡಿ ಜಿಲ್ಲೆಗಳ ಸಮೀಪ 10 ಕಿ.ಮೀ. ಒಳಗೆ ಶಾಶ್ವತ ನೆಲೆ ಸ್ಥಾಪಿಸಲು ಜೆಎಂಬಿ ಯೋಜನೆ ಹೊಂದಿರುವುದು ಇತ್ತೀಚಿನ ತನಿಖೆಗಳಿಂದ ಗೊತ್ತಾಗಿದೆ. ಜತೆಗೆ ದಕ್ಷಿಣ ಭಾರತದಲ್ಲೂ ತನ್ನ ಚಟುವಟಿಕೆ ವಿಸ್ತರಿಸಲು ಯೋಜನೆ ಹೊಂದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಲ್ಲದೇ,ಕಾನೂನುಬಾಹಿರ (ಚಟುವಟಿಕೆಗಳನ್ನು ತಡೆಗಟ್ಟುವಿಕೆ) ಕಾಯ್ದೆ– 1967ರ ಅಡಿಯಲ್ಲಿ ಜೆಎಂಬಿ ಅನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ.

ಜಿಹಾದ್‌ ಮೂಲಕ ಇಸ್ಲಾಮಿಕ್‌ ಸಾಮ್ರಾಜ್ಯ ಸ್ಥಾಪನೆಯ ಗುರಿಯನ್ನಿಟ್ಟುಕೊಂಡು 1998ರಲ್ಲಿ ಬಾಂಗ್ಲಾದೇಶದಲ್ಲಿ ಜೆಎಂಬಿ ಅಸ್ತಿತ್ವಕ್ಕೆ ಬಂದಿದೆ.

‘ಜೆಎಂಬಿಯು ಜಮಾತ್‌– ಉಲ್‌– ಮುಜಾಹಿದೀನ್‌ ಇಂಡಿಯಾ ಅಥವಾ ಜಮಾತ್‌– ಉಲ್‌– ಮುಜಾಹಿದ್ದೀನ್‌ ಹಿಂದೂಸ್ತಾನ ಎಂಬ ಹೆಸರಿನಲ್ಲಿ ಚಟುವಟಿಕೆ ನಡೆಸಲು ಯೋಚಿಸಿದೆ. ಭಯೋತ್ಪಾದನಾ ಚಟುವಟಿಕೆ, ಉಗ್ರ ಚಟುವಟಿಕೆಗೆ ಪ್ರಚೋದನೆ ನೀಡುವುದು, ಭಾರತದಲ್ಲಿ ಉಗ್ರ ಚಟುವಟಿಕೆಗಾಗಿ ಯುವಕರನ್ನು ನೇಮಕ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಭಯೋತ್ಪಾದನಾ ಚಟುವಟಿಕೆಗೆ ಹಣ ಸಂಗ್ರಹಿಸುವಲ್ಲಿ ಮತ್ತು ಸ್ಫೋಟಕ ಖರೀದಿ ಮತ್ತು ಸುಧಾರಿತ ಸ್ಫೋಟಕ ವಸ್ತುಗಳನ್ನು ಬಳಸಿ ಬಾಂಬ್‌ ತಯಾರಿಸುವಲ್ಲಿ ಜೆಎಂಬಿ ಈಗಾಗಲೇ ತೊಡಗಿಸಿಕೊಂಡಿದೆ’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಪಶ್ಚಿಮ ಬಂಗಾಳದ ಬುರ್ಧ್ವಾನ್‌ನಲ್ಲಿ 2014ರ ಅಕ್ಟೋಬರ್‌ 2 ರಂದು ನಡೆದ ಬಾಂಬ್‌ ಸ್ಫೋಟ ಮತ್ತು ಬಿಹಾರದ ಬೋಧ ಗಯಾದಲ್ಲಿ 2018ರ ಜನವರಿ 19 ರಂದು ನಡೆದ ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸಿದ ಸಂದರ್ಭದಲ್ಲಿ ಜೆಎಂಬಿ ಭಾರತದೊಳಗೆ ಚಟುವಟಿಕೆ ನಡೆಸಲು ಯೋಜನೆ ಹೊಂದಿರುವುದು ಬೆಳಕಿಗೆ ಬಂದಿದೆ. ಐದು ಪ್ರಕರಣಗಳಲ್ಲಿ ಜೆಎಂಬಿ ಭಾಗಿಯಾಗಿರುವುದನ್ನು ಅಸ್ಸಾಂ ಪೊಲೀಸರು ಪತ್ತೆ ಹಚ್ಚಿದ್ದು, 55 ಮಂದಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.