ಚಂಡೀಗಡ:ಪತ್ರಕರ್ತ ರಾಮ್ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿ ದೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಸೇರಿದಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಶುಕ್ರವಾರ ಈ ಮಹತ್ವದ ಆದೇಶ ನೀಡಿರುವ ನ್ಯಾಯಾಲಯ, ಇದೇ 17ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿ
ಸಲಿದೆ.
ಕುಲದೀಪ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕೃಷ್ಣ ಲಾಲ್ ಇತರ ತಪ್ಪಿತಸ್ಥರು. 2002ರಲ್ಲಿ ಛತ್ರಪತಿ ಹತ್ಯೆಯಾಗಿತ್ತು.
ಪ್ರಸ್ತುತ ರೋಹ್ಟಕ್ನ ಸುನರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ 51 ವರ್ಷದ ಗುರ್ಮೀತ್ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು.
ಇಬ್ಬರು ಮಹಿಳಾ ಅನುಯಾಯಿಗಳ ಮೇಲಿನಅತ್ಯಾಚಾರ ಪ್ರಕರಣದ ಸಂಬಂಧ 2017ರ ಆಗಸ್ಟ್ನಲ್ಲಿ ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ, ಪಂಚಕುಲ ಮತ್ತು ದೇರಾದ ಕೇಂದ್ರ ಸ್ಥಾನವಿರುವ ಸಿರ್ಸಾದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಇದರಿಂದ 40 ಜನ ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು. ಹೀಗಾಗಿ, ಈ ಬಾರಿ ಗುರ್ಮೀತ್ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ಪಂಚಕುಲ ಮತ್ತು ಸಿರ್ಸಾದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ರಾಜ್ಯದ ಸಶಸ್ತ್ರ ಪೊಲೀಸ್ ಹಾಗೂ ಕಮಾಂಡೊ ಪಡೆಗಳನ್ನು ನಿಯೋಜಿಸಲಾಗಿತ್ತು.
ಗುರ್ಮೀತ್ನಿಂದ ಮಹಿಳೆಯರು ಹೇಗೆ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದ ಅನಾಮಿಕ ವ್ಯಕ್ತಿಯ ಪತ್ರವನ್ನು ತಮ್ಮ ಪತ್ರಿಕೆ ‘ಪೂರಾ ಸಚ್’ನಲ್ಲಿ ಛತ್ರಪತಿ ಪ್ರಕಟಿಸಿದ್ದರು. ಇದಾದ ಬಳಿಕ, 2002ರ ಅಕ್ಟೋಬರ್ನಲ್ಲಿ ತಮ್ಮ ಮನೆಯ ಎದುರೇ ಅವರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಈ ಸಂಬಂಧ 2003ರಲ್ಲಿ ದಾಖಲಾಗಿದ್ದ ಪ್ರಕರಣವನ್ನು 2006ರಲ್ಲಿ ಸಿಬಿಐ ತನಿಖೆಗೆ ಹಸ್ತಾಂತರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.