
ಲಖನೌ: ದೇಶದಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳಿಲ್ಲ ಎಂದು ಇನ್ಮುಂದೆ ಯುವ ವೈದ್ಯರು ದೂರುವಂತಿಲ್ಲ. ನ್ಯೂನತೆಗಳ ಬಗ್ಗೆ ದೂರುತ್ತಾ ವಿದೇಶಗಳಿಗೆ ತೆರಳುವ ಮುನ್ನ, ಲಭ್ಯವಿರುವ ವೈದ್ಯಕೀಯ ಸಂಸ್ಥೆಗಳು ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಿ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದರು.
ಕಿಂಗ್ ಜಾರ್ಜ್ ಅವರ ವೈದ್ಯಕೀಯ ಕಾಲೇಜಿನ (ಕೆಜಿಎಂಯು) 21ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ವಿದೇಶಕ್ಕೆ ಹೋಗುವವರಿಗೆ ಯಾವುದೇ ಅಡ್ಡಿಯಿಲ್ಲ, ಅವರು ಮುಕ್ತವಾಗಿ ಹೋಗಬಹುದು. ಆದರೆ ಭಾರತದಲ್ಲಿ ಸೌಕರ್ಯ, ಸೌಲಭ್ಯಗಳ ಕೊರತೆ ಇದೆ ಎಂದು ಹೇಳುವಂತಿಲ್ಲ. ಇಲ್ಲಿ ಅತ್ಯುನ್ನತ ಸಂಸ್ಥೆಗಳಿವೆ, ಸೌಕರ್ಯಗಳಿವೆ’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ವೈದ್ಯಕೀಯ ಶಿಕ್ಷಣವು ಹಲವು ಸುಧಾರಣೆಗಳನ್ನು ಕಂಡಿದೆ. ದೇಶದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಏಮ್ಸ್) ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದರು.
‘ಇಂದು ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.