ADVERTISEMENT

ಕಾನ್ಪುರ ಹಿಂಸಾಚಾರ: ಗುಪ್ತಚರ ವೈಫಲ್ಯ, ನಿಷ್ಪಕ್ಷಪಾತ ತನಿಖೆಗೆ ಮಾಯಾವತಿ ಒತ್ತಾಯ

ಪಿಟಿಐ
Published 4 ಜೂನ್ 2022, 9:58 IST
Last Updated 4 ಜೂನ್ 2022, 9:58 IST
ಮಾಯಾವತಿ
ಮಾಯಾವತಿ   

ಲಖನೌ:ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ನಡೆದ ಹಿಂಸಾಚಾರ, ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಮಾಯಾವತಿ, ಇದು ಪೊಲೀಸ್ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಹೇಳಿದ್ದಾರೆ.

ಅಲ್ಲದೆ ಜಾತಿ, ಧರ್ಮ, ಪಕ್ಷ ರಾಜಕಾರಣಕ್ಕೂ ಮೀರಿ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಕೂಡ ಆಗಿರುವ ಮಾಯಾವತಿ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ, 'ರಾಷ್ಟ್ರಪತಿ, ಪ್ರಧಾನ ಮಂತ್ರಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ಅತ್ಯಂತ ದುರದೃಷ್ಟಕರ ಹಾಗೂ ಆತಂಕಕಾರಿ ವಿಚಾರವಾಗಿದೆ. ಇದು ಪೊಲೀಸ್ ಗುಪ್ತಚರ ವೈಫಲ್ಯದ ಸಂಕೇತವಾಗಿದೆ' ಎಂದು ಆರೋಪಿಸಿದ್ದಾರೆ.

ಶಾಂತಿ ಸುವ್ಯವಸ್ಥೆ ಇಲ್ಲದಿರುವಾಗ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ಸರ್ಕಾರ ಮನಗಾಣಬೇಕಿದೆ ಎಂದು ಹೇಳಿದರು.

'ಧರ್ಮ, ಜಾತಿ, ಪಕ್ಷ ರಾಜಕಾರಣವನ್ನು ಲೆಕ್ಕಿಸದೆ ಈ ಘಟನೆ ಬಗ್ಗೆ ಮುಕ್ತ ಹಾಗೂ ನ್ಯಾಯಸಮ್ಮತವಾದ ಉನ್ನತ ಮಟ್ಟದ ತನಿಖೆ ನಡೆಸುವ ಮೂಲಕ ತಪ್ಪಿತ್ತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಬಾರದು. ರಾಜ್ಯದಲ್ಲಿ ಶಾಂತಿ , ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಚೋದನಕಾರಿ ಭಾಷಣ ನೀಡುವುದನ್ನು ತಪ್ಪಿಸುವಂತೆಯು ಮಾಯಾವತಿ ಜನರಲ್ಲಿ ಮನವಿ ಮಾಡಿದರು.

ಇತ್ತೀಚೆಗೆ ಟಿ.ವಿ. ಸಂದರ್ಶನದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಒಂದು ಗುಂಪಿನ ಬೆಂಬಲಿಗರು ಅಂಗಡಿಗಳನ್ನು ಬಲವಂತವಾಗಿ ಮುಚ್ಚಲು ಪ್ರಯತ್ನಿಸಿದಾಗ, ಮತ್ತೊಂದು ಗುಂಪಿನ ಕಡೆಯವರು ಬಾಂಬ್ ಎಸೆದು, ಗುಂಡು ಹಾರಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.