ADVERTISEMENT

ಕಾರ್ಗಿಲ್‌ ವಿಜಯ ದಿನ | ಯೋಧರ ತ್ಯಾಗಕ್ಕೆ ರಾಷ್ಟ್ರ ಕೃತಜ್ಞ: ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 3:10 IST
Last Updated 26 ಜುಲೈ 2019, 3:10 IST
ಜಮ್ಮು ಮತ್ತು ಕಾಶ್ಮಿರದ ಡ್ರಾಸ್‌ನಲ್ಲಿ ನಿರ್ಮಿಸಿರುವ ಕಾರ್ಗಿಲ್‌ ಯುದ್ಧದ ಹುತಾತ್ಮ ಯೋಧರ ಸ್ಮಾರಕ . ಚಿತ್ರ; ಎಎನ್‌ಐ ಟ್ವೀಟ್‌
ಜಮ್ಮು ಮತ್ತು ಕಾಶ್ಮಿರದ ಡ್ರಾಸ್‌ನಲ್ಲಿ ನಿರ್ಮಿಸಿರುವ ಕಾರ್ಗಿಲ್‌ ಯುದ್ಧದ ಹುತಾತ್ಮ ಯೋಧರ ಸ್ಮಾರಕ . ಚಿತ್ರ; ಎಎನ್‌ಐ ಟ್ವೀಟ್‌   

ನವದೆಹಲಿ:ಕಾರ್ಗಿಲ್‌ ವಿಜಯ್‌ ದಿನ(ಜುಲೈ 26) ಅಂಗವಾಗಿ ಅಂದು ಶೌರ್ಯ ಮೆರೆದ ಭಾರತೀಯ ಯೋಧರ ಕೊಡುಗೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸ್ಮರಿಸಿದ್ದಾರೆ.

1999ರಲ್ಲಿ ಕಾರ್ಗಿಲ್‌ನ ಎತ್ತರದ ಸ್ಥಳದಲ್ಲಿ ಭಾರತದ ಯೋಧರು ಮೆರೆದ ಶೌರ್ಯ ಶ್ಲಾಘನೀಯ, ಅವರ ತ್ಯಾಗಕ್ಕೆ ರಾಷ್ಟ್ರ ಕೃತಜ್ಞವಾಗಿದೆ ಎಂದು ರಾಮನಾಥ ಕೋವಿಂದ್‌ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಭಾರತದ ರಕ್ಷಣೆಗೆ ಹೋರಾಡಿ ತಮ್ಮನ್ನು ಸಮರ್ಪಿಸಿಕೊಂಡು ಹುತಾತ್ಮರಾದ ಯೋಧರ ಶೌರ್ಯಕ್ಕೆ ನಾವು ನಮಸ್ಕರಿಸುತ್ತೇವೆ ಎಂದು ಹೇಳಿದ್ದಾರೆ.

ADVERTISEMENT

ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ನಮ್ಮ ಯೋಧರು 20 ವರ್ಷಗಳ ಹಿಂದೆ ಇದೇ ದಿನ(ಜುಲೈ 26) ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು ‘ಕಾರ್ಗಿಲ್‌ ವಿಜಯ್‌ ದಿನ’ವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಇದು ವಿಜಯೋತ್ಸವದ ಜತೆಗೆ ನಮ್ಮ ಧೀರ ಯೋಧರ ತ್ಯಾಗ ಬಲಿದಾನದ ನೆನಪಿನ ದಿನವೂ ಹೌದು.

ಕಾರ್ಗಿಲ್ ವಿಜಯ್ ದಿವಸ್‌ಗೆ ಸಂಬಂಧಿಸಿದ ಬರಹಗಳಿಗೆ www.prajavani.net/tags/kargil ನೋಡಿ

ಡ್ರಾಸ್‌ನಲ್ಲಿನ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ‌

ಕಾರ್ಗಿಲ್‌ ವಿಜಯ್‌ ದಿವಸ್ ಅಂಗವಾಗಿ ಜಮ್ಮು ಮತ್ತು ಕಾಶ್ಮಿರದ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಯೋಧರು ಬೆಳಿಗ್ಗೆನಮನ ಸಲ್ಲಿಸಿದರು.

ಶತ್ರುಗಳನ್ನು ಸದೆಬಡಿಯುವುದೇ ನಮ್ಮ ಗುರಿಯಾಗಿತ್ತು: ನಾಯಕ್‌ ದೀಪ್‌ ಚಂದ್‌

‘ಕಾರ್ಗಿಲ್‌ ಯುದ್ಧದ ಸಮಯದಲ್ಲಿ ನನ್ನ ಬೆಟಾಲಿಯನ್‌ 10 ಸಾವಿರ ಸುತ್ತು ಗುಂಡು ಹಾರಿಸಿತು. ಈ ಸಂಗತಿ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಮನಸ್ಸಿನಲ್ಲಿ ಒಂದು ಗುರಿ ಇತ್ತು. ಅದೇನೆಂದರೆ, ಶತ್ರುಗಳನ್ನು ಸದೆಬಡಿಯುವುದು. ಕಾರ್ಗಿಲ್‌ ಯುದ್ಧದಲ್ಲಿ ಪ್ರಾಣ ತೆತ್ತ ಯೋಧರಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ’ ಎಂದು ಕಾರ್ಗಿಲ್‌ ಯುದ್ಧ ಸಮಯದಲ್ಲಿ ಸೇನೆಯ 1889 ಮಿಸೈಲ್‌ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸಿದ್ದ ನಾಯಕ್‌ ದೀಪ್‌ಚಂದ್‌ ಅವರು ಇಂದು ಜಮ್ಮು ಕಾಶ್ಮಿರದ ಡ್ರಾಸ್‌ನಲ್ಲಿನ ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದ ಸಂದರ್ಭದಲ್ಲಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.