ADVERTISEMENT

ಪ್ರಣಾಳಿಕೆಯಲ್ಲಿ CAA ಉಲ್ಲೇಖಿಸಲು ಕಾಂಗ್ರೆಸ್‌ಗೆ ಭಯ: ಪಿಣರಾಯಿ ವಿಜಯನ್

ಪಿಟಿಐ
Published 9 ಏಪ್ರಿಲ್ 2024, 10:09 IST
Last Updated 9 ಏಪ್ರಿಲ್ 2024, 10:09 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ಕೊಲ್ಲಂ (ಕೇರಳ): 2024ರ ಲೋಕಸಭಾ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ಯಾವುದೇ ಉಲ್ಲೇಖ ಮಾಡದೇ ಇರುವ ಕಾಂಗ್ರೆಸ್‌ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ. ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ಕಾಂಗ್ರೆಸ್‌ಗೆ ಇರುವ ಭಯವನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಸೇರಿ, ಸಂವಿಧಾನವನ್ನು ಉಲ್ಲಂಘಿಸಿ ಜಾರಿಗೆ ತರಲಾದ ಹಲವು ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಸಿಎಎ ಬಗ್ಗೆ ಒಂದು ಶಬ್ದವನ್ನೂ ಉಲ್ಲೇಖಿಸಿಲ್ಲ’ ಎಂದು ಅವರು ದೂರಿದ್ದಾರೆ.

‘ಸಿಎಎ ಅನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸದೇ ಉದ್ದೇಶಪೂರ್ವಕವಾಗಿಯೇ ಹೊರಗಿಡಲಾಗಿದೆ. ಹಲವು ಕಾನೂನುಗಳನ್ನು ಉಲ್ಲೇಖಿಸಿ ಅವುಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್, ಸಿಎಎ ಬಗ್ಗೆ ಮಾತನಾಡಲು ಭಯಪಡುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಸಂವಿಧಾನದ 15,16,25,26,28,29 ಹಾಗೂ 30ನೇ ಪರಿಚ್ಛೇದದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದಾಗಿ ಪ್ರಣಾಳಿಕೆಯ 8ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಸಂಬಂಧ ಸಿಎಎಯಲ್ಲಿ ಇರುವ ಯಾವುದರ ಬಗ್ಗೆಯೂ ಕಾಂಗ್ರೆಸ್ ಚಕಾರವೆತ್ತಿಲ್ಲ’ ಎಂದು ಹೇಳಿದ್ದಾರೆ.

‘ಸಿಎಎಯು ಸಂವಿಧಾನದ 14ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 14ನೇ ಪರಿಚ್ಛೇದದ ಉಲ್ಲೇಖವೇ ಇಲ್ಲ’ ಎಂದು ಹೇಳಿದರು.

‘ಕಾರ್ಮಿಕರು, ರೈತರು, ಕ್ರಿಮಿನಲ್ ನ್ಯಾಯ, ಪರಿಸರ, ಅರಣ್ಯ ಮತ್ತು ಡಿಜಿಟಲ್ ದತ್ತಾಂಶ ರಕ್ಷಣೆ ಮುಂತಾದ ಜನವಿರೋಧಿ ಕಾನೂನುಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಭರವಸೆಯಿತ್ತಿದೆ. ಇದಕ್ಕೆ ನಮ್ಮ ಬೆಂಬಲವಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.