ಕೊಚ್ಚಿ:ಇಲ್ಲಿನ ಫ್ಲಾಟ್ವೊಂದರಲ್ಲಿ27 ವರ್ಷದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ತ್ರಿಶೂರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ. ಮಹಿಳೆಗೆ ಫೆಬ್ರುವರಿ15 ರಿಂದ ಮಾರ್ಚ್ 8ರವರೆಗೆ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿತ್ತು.
ಮುಖ್ಯ ಆರೋಪಿ ಮಾರ್ಟಿನ್ ಜೋಸೆಫ್ (33) ಎಂಬಾತ ತ್ರಿಶೂರ್ ಜಿಲ್ಲೆಯ ಪೆರಮಂಗಳಂನಲ್ಲಿ ಸೆರೆ ಸಿಕ್ಕಿದ್ದು, ಬಳಿಕ ಕೊಚ್ಚಿಗೆ ಕರೆತರಲಾಗಿದೆ.
ʼನಾವು ಒಂದು ಗಂಟೆ ಹಿಂದಷ್ಟೇ ಮಾರ್ಟಿನ್ ಜೋಸೆಫ್ನನ್ನು ಬಂಧಿಸಿದ್ದೇವೆ. ಪೊಲೀಸರು ಆತನನ್ನು ತ್ರಿಶೂರ್ ಜಿಲ್ಲೆಯ ಪೆರಮಂಗಳಂನಲ್ಲಿ ಬಂಧಿಸಿದ್ದಾರೆ. ನ್ಯಾಯಾಲಯದೆದುರು ನಾಳೆ ಹಾಜರುಪಡಿಸಲಿದ್ದೇವೆ. ಬೆಳಗ್ಗೆ ಹೆಚ್ಚಿನ ವಿವರ ನೀಡುತ್ತೇನೆʼ ಎಂದು ಕೊಚ್ಚಿ ಪೊಲೀಸ್ ಕಮಿಷನರ್ ನಾಗರಾಜು ಚಕಿಲಂ ಗುರುವಾರ ರಾತ್ರಿ ತಿಳಿಸಿದ್ದರು.
ಜೋಸೆಫ್ನ ಸಹಚರರಾದ ಶ್ರೀರಾಗ್, ಜಾನ್ ರಾಯ್ ಮತ್ತು ಧನೇಶ್ ಎನ್ನುವವರನ್ನು ಈಗಾಗಲೇ ಬಂಧಿಸಲಾಗಿದೆ. ಮಾರ್ಟಿನ್ ಕೊಚ್ಚಿಯಿಂದ ತ್ರಿಶೂರ್ಗೆ ಪರಾರಿಯಾಗಲು ನೆರವಾಗಿದ್ದ ಈ ಮೂವರನ್ನುಎರ್ನಾಕುಲಂನ ಕೇಂದ್ರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ. ಅವರ ಕಾರು ವಶಕ್ಕೆ ಪಡೆಯಲಾಗಿದೆ.
ಕುನ್ನೂರು ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ, ಫ್ಲಾಟ್ನಿಂದ ತಪ್ಪಿಸಿಕೊಂಡು ಬಂದು ಏಪ್ರಿಲ್ 8ರಂದು ದೂರು ನೀಡಿದ್ದರು. ಆರೋಪಿಯುತಮ್ಮಿಂದ ₹5 ಲಕ್ಷ ದೋಚಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ವಿರುದ್ಧ ಐಪಿಸಿಯ 323 (ಹಲ್ಲೆ), 324(ಮಾರಕಾಸ್ತ್ರಗಳಿಂದ ಹಲ್ಲೆ), 376 (ಅತ್ಯಾಚಾರ), 420 (ಮೋಸ) ಮತ್ತು 506 (ಬೆದರಿಕೆ)ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಪೊಲೀಸರ ಮಾಹಿತಿ ಪ್ರಕಾರ ಆರೋಪಿಯು ಸಂತ್ರಸ್ತ ಮಹಿಳೆ ಕಳೆದ ವರ್ಷ ಲಾಕ್ಡೌನ್ ಆರಂಭವಾದಾಗಿನಿಂದಲೂಲಿವ್-ಇನ್ ರಿಲೇಷನ್ಷಿಪ್ನಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.