ADVERTISEMENT

Kunal Kamra Controversy | ಕುನಾಲ್ ಹಾಸ್ಯ: ‘ಮಹಾ’ದಲ್ಲಿ ಗದ್ದಲ

ಕ್ಷಮೆಯಾಚನೆಗೆ ಮುಖ್ಯಮಂತ್ರಿ ಆಗ್ರಹ l ಶಿವಸೇನಾ ಕಾರ್ಯಕರ್ತರ ಬಂಧನ

ಪಿಟಿಐ
​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
<div class="paragraphs"><p>ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಶಿವಸೇನಾ ಕಾರ್ಯಕರ್ತರು ದಾಂದಲೆ ನಡೆಸಿದರು</p></div>

ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಶಿವಸೇನಾ ಕಾರ್ಯಕರ್ತರು ದಾಂದಲೆ ನಡೆಸಿದರು

   

ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಗುರಿಯಾಗಿಸಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಾತಿನಿಂದ ತಿವಿದ ಬಗೆಯು ಮಹಾರಾಷ್ಟ್ರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.

ADVERTISEMENT

ಶಿವಸೇನಾ ಸದಸ್ಯರು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದರು, ಶಿಂದೆ ಅವರನ್ನು ‘ವಂಚಕ’ ಎಂದು ಕರೆದ ಕುನಾಲ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಗದ್ದಲ ನಿಯಂತ್ರಿಸಲು ಸ್ಪೀಕರ್ ರಾಹುಲ್ ನಾರ್ವೇಕರ ಅವರು ಸದನವನ್ನು ಕೆಲಕಾಲ ಮುಂದೂಡಬೇಕಾಯಿತು. ವಿಧಾನ ಪರಿಷತ್ತಿನಲ್ಲಿಯೂ ಇದೇ ವಿಷಯವಾಗಿ ಗದ್ದಲ ಉಂಟಾದ್ದರಿಂದ ಸದನವನ್ನು ಮೂರು ಬಾರಿ ಮುಂದೂಡಲಾಯಿತು.

ಕುನಾಲ್‌ಗೆ ಬೆಂಬಲ:

ಕುನಾಲ್‌ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿರುವ ವಿರೋಧ ಪಕ್ಷಗಳು, ಕುನಾಲ್‌ ಅವರ ಕಾರ್ಯಕ್ರಮ ನಡೆದ ಸ್ಟುಡಿಯೊದಲ್ಲಿ ಶಿವಸೇನಾ ಕಾರ್ಯಕರ್ತರು ದಾಂದಲೆ ನಡೆಸಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನ ಎಂದು ಹೇಳಿವೆ.

‘ಕುನಾಲ್‌ ಅವರನ್ನು ನಾವು ಬೆಂಬಲಿಸುತ್ತಿಲ್ಲ. ಆದರೆ ಅಧಿಕಾರದಲ್ಲಿರುವ ಪಕ್ಷಗಳು ಸಾಮಾಜಿಕ ಸೌಹಾರ್ದ ಕೆಡಿಸುವುದನ್ನು ವಿರೋಧಿಸುತ್ತಿದ್ದೇವೆ’ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ, ಶಿವಸೇನಾ (ಯುಬಿಟಿ) ಶಾಸಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ.

ಕುನಾಲ್‌ ಅವರು ವಿವಾದಿತ ಕಾರ್ಯಕ್ರಮ ನಡೆಸಿದ ಸ್ಥಳದಲ್ಲಿ ಶಿವಸೇನಾ ಕಾರ್ಯಕರ್ತರು ದಾಂದಲೆ ನಡೆಸಿದ್ದನ್ನು ವಿರೋಧ ಪಕ್ಷಗಳು ಖಂಡಿಸಿವೆ. ಆದರೆ ಕಾರ್ಯಕರ್ತರಿಂದ ಆಗಿರುವುದು ‘ಸ್ವಾಭಾವಿಕ ಪ್ರತಿಕ್ರಿಯೆ’ ಎಂದು ಶಿವಸೇನಾ ಹೇಳಿದೆ.

ದಾಂದಲೆ ನಡೆಸಿರುವುದು ಹಿಂಸೆಯನ್ನು ಲಜ್ಜೆಯಿಲ್ಲದೆ ಬಳಸಿದ್ದಕ್ಕೆ, ಕಾನೂನನ್ನು ಕೈಗೆತ್ತಿಕೊಂಡಿರುವುದಕ್ಕೆ
ನಿದರ್ಶನ ಎಂದು ಶಿವಸೇನಾ (ಯುಬಿಟಿ) ನಾಯಕಿ, ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಹಾಸ್ಯದ ಮಾತುಗಳು ಜನರಲ್ಲಿ ಕೋಪ ಮೂಡಿಸುತ್ತಿರುವುದು ದುರದೃಷ್ಟಕರ ಎಂದು ಕಾಂಗ್ರೆಸ್ ಮುಖಂಡ ಮಣಿಕ್ಕಂ ಟ್ಯಾಗೋರ್ ಹೇಳಿದ್ದಾರೆ.

ಕುಣಾಲ್ ಕಾಮ್ರಾ

12 ಮಂದಿ ಬಂಧನ

ಮುಂಬೈ (ಪಿಟಿಐ): ಕುನಾಲ್‌ ಕಾಮ್ರಾ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕರೆದ ಸ್ಥಳದಲ್ಲಿ ದಾಂದಲೆ ನಡೆಸಿದ ಆರೋಪದ ಅಡಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಮತ್ತು 11 ಮಂದಿ ಇತರರನ್ನು ಬಂಧಿಸಿದ್ದಾರೆ.

‘ಇದು ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಸಂಬಂಧಿಸಿದ್ದಲ್ಲ; ಆತ್ಮಗೌರವದ ವಿಚಾರ. ನಿಮ್ಮ ಹಿರಿಯರನ್ನು ಗುರಿಯಾಗಿಸಿದಾಗ, ಅಂತಹ ಮನಃಸ್ಥಿತಿಯವರನ್ನು ನೀವು ಗುರಿಯಾಗಿಸುತ್ತೀರಿ’ ಎಂದು ಕನಲ್ ಅವರು ಸೋಮವಾರ ಬೆಳಿಗ್ಗೆ ಹೇಳಿದ್ದರು. ‘ಇದು ಟ್ರೇಲರ್ ಮಾತ್ರ, ಸಿನಿಮಾ ಇನ್ನೂ ಇದೆ’ ಎಂದು ಕನಲ್ ಎಚ್ಚರಿಕೆ ನೀಡಿದ್ದರು.

ದಾಂದಲೆ ನಡೆಸಿದವರ ಪೈಕಿ 15–20 ಮಂದಿಯನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುನಾಲ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಸತ್ಯವನ್ನು ಉಲ್ಲೇಖಿಸಿ, ಸಾರ್ವಜನಿಕ ಅಭಿಪ್ರಾಯಕ್ಕೆ ಧ್ವನಿಯಾಗಿದ್ದಾರೆ. ಅವರು ತಪ್ಪು ಮಾಡಿಲ್ಲ
ಉದ್ಧವ್ ಠಾಕ್ರೆ, ಶಿವಸೇನಾ (ಯುಬಿಟಿ) ನಾಯಕ
ಶಿಂದೆ ಅವರನ್ನು ಅಣಕಿಸುವುದು ಶ್ರೇಷ್ಠತೆಯ ಸೊಕ್ಕಿನಂತೆ ಕಾಣಿಸುತ್ತಿದೆ
ಮಿಲಿಂದ್ ದೇವ್ರಾ, ಶಿವಸೇನಾ ನಾಯಕ, ರಾಜ್ಯಸಭಾ ಸದಸ್ಯ
ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಅವಮಾನಿಸಿದ್ದಕ್ಕೆ ಕುನಾಲ್‌ ಕಾಮ್ರಾ ಕ್ಷಮೆ ಕೇಳಬೇಕು.
ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಕುನಾಲ್‌ಗೆ ಮುಕ್ತವಾಗಿ ಸಂಚರಿಸಲು ಬಿಡುವುದಿಲ್ಲ. ಅವರನ್ನು ಪಕ್ಷದ ಕಾರ್ಯಕರ್ತರು ಅಟ್ಟಿಸಿಕೊಂಡು ಹೋಗುತ್ತಾರೆ. ಅವರು ದೇಶದಿಂದ ಓಡುವಂತೆ ಮಾಡುತ್ತೇವೆ
ನರೇಶ್ ಮಹ್‌ಸ್ಕೆ, ಶಿವಸೇನಾ ಸಂಸದ

ಕುನಾಲ್‌ ಹಾಸ್ಯ ಸೃಷ್ಟಿಸಿದ ವಿವಾದ

*2022ರಲ್ಲಿ ಏಕನಾಥ ಶಿಂದೆ ಅವರು ಉದ್ಧವ್ ಠಾಕ್ರೆ ವಿರುದ್ಧ ನಡೆಸಿದ ಬಂಡಾಯವನ್ನು ವಿವರಿಸಲು ಕುನಾಲ್‌ ಅವರು ‘ದಿಲ್ ತೊ ಪಾಗಲ್‌ ಹೈ’ ಸಿನಿಮಾದ ಹಾಡೊಂದನ್ನು ಮಾರ್ಪಾಡು ಮಾಡಿ ಹಾಡಿದ್ದರು.

*ಇದರಿಂದ ಕೆರಳಿದ ಶಿವಸೇನಾ ಕಾರ್ಯಕರ್ತರು ಕುನಾಲ್‌ ಅವರು ಈ ಹಾಡನ್ನು ಹೇಳಿದ್ದ ಕಾರ್ಯಕ್ರಮ ಚಿತ್ರೀಕರಿಸಿದ್ದ ‘ಹ್ಯಾಬಿಟ್ಯಾಟ್ ಸ್ಟುಡಿಯೊ’ದಲ್ಲಿ ಭಾನುವಾರ ರಾತ್ರಿ ದಾಂದಲೆ ನಡೆಸಿದರು.

*ಶಿಂದೆ ಅವರನ್ನು ಗುರಿಯಾಗಿಸಿ ಅವಹೇಳನಕಾರಿ ಮಾತು ಆಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಮುಂಬೈ ಪೊಲೀಸರು ಕುನಾಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

*ಹ್ಯಾಬಿಟ್ಯಾಟ್ ಸ್ಟುಡಿಯೊ ಸ್ಥಗಿತಗೊಳಿಸಲು ಅದರ ನಿರ್ವಾಹಕರು ನಿರ್ಧರಿಸಿದ್ದಾರೆ.

*ಕ್ಷಮೆ ಯಾಚಿಸಲು ಕುನಾಲ್‌ ನಿರಾಕರಿಸಿದ್ದಾರೆ ಎನ್ನಲಾಗಿದೆ. ನ್ಯಾಯಾಲಯ ಕೇಳಿದರೆ ಮಾತ್ರ ಕ್ಷಮೆ ಕೋರುವುದಾಗಿ ಅವರು ಹೇಳಿದ್ದಾರೆ.‌

‘ಅಕ್ರಮ’ ಶೆಡ್‌ ತೆರವು

ಮುಂಬೈ: ಕುನಾಲ್‌ ಕಾಮ್ರಾ ಅವರು ಹಾಸ್ಯ ಕಾರ್ಯಕ್ರಮ ನಡೆಸಿದ್ದ ಸ್ಟುಡಿಯೊದ ‘ಅಕ್ರಮ ಭಾಗ’ವನ್ನು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯು ತೆರವುಗೊಳಿಸಿದೆ.

‘ಸ್ಟುಡಿಯೊ ಮಾಲೀಕರು ತಾತ್ಕಾಲಿಕವಾದ ಕೆಲವು ಶೆಡ್‌ಗಳನ್ನು ಅಕ್ರಮವಾಗಿ ನಿರ್ಮಿಸಿದ್ದರು. ಅದನ್ನು ನಾವು ತೆರವು ಮಾಡುತ್ತಿದ್ದೇವೆ. ಇದಕ್ಕೆ ನೋಟಿಸ್‌ ನೀಡಬೇಕಾದ ಅಗತ್ಯವಿಲ್ಲ’ ಎಂದು ಪಾಲಿಕೆಯ ಸಹಾಯಕ ಆಯುಕ್ತ ವಿನಾಯಕ ವಿಸ್ಪುತೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.