ADVERTISEMENT

ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ: ಮೋದಿ ಸೇರಿ ಪ್ರಮುಖ ನಾಯಕರ ಗೌರವ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2021, 8:38 IST
Last Updated 2 ಅಕ್ಟೋಬರ್ 2021, 8:38 IST
ಲಾಲ್‌ ಬಹದ್ದೂರ್‌ ಶಾಸ್ತ್ರಿ
ಲಾಲ್‌ ಬಹದ್ದೂರ್‌ ಶಾಸ್ತ್ರಿ    

ನವದೆಹಲಿ: ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ 117ನೇ ಜನ್ಮದಿನವನ್ನು ಇಂದು(ಶನಿವಾರ) ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಮುಖ ನಾಯಕರು ಶಾಸ್ತ್ರಿ ಅವರ ಸಮಾಧಿ ಸ್ಥಳವಾದ ವಿಜಯ್‌ ಘಾಟ್‌ಗೆ ತೆರಳಿ ಗೌರವ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಸೇರಿದಂತೆ ಹಲವು ಪ್ರಮುಖ ನಾಯಕರು ಶಾಸ್ತ್ರಿ ಅವರನ್ನು ಸ್ಮರಿಸಿದ್ದಾರೆ.

ಶಾಸ್ತ್ರಿ ಅವರಿಗೆ ಟ್ವೀಟ್‌ ಮೂಲಕ ನಮನ ಸಲ್ಲಿಸಿರುವ ಮೋದಿ, 'ಮೌಲ್ಯ ಹಾಗೂ ತತ್ವಗಳನ್ನು ಆಧರಿಸಿದ ಅವರ ಜೀವನವು ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ' ಎಂದು ತಿಳಿಸಿದ್ದಾರೆ.

ADVERTISEMENT

ವಿಜಯ್‌ ಘಾಟ್‌ನಲ್ಲಿ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, 'ನಮ್ಮ ರಕ್ಷಣಾ ಸಿಬ್ಬಂದಿ ಮತ್ತು ರೈತರ ಬಗ್ಗೆ ಶಾಸ್ತ್ರಿಯವರು ಅಪಾರ ಕಾಳಜಿ ಹೊಂದಿದ್ದರು. ಅವರ ನಿಸ್ವಾರ್ಥ ಸೇವೆಯನ್ನು ಯಾವಾಗಲೂ ಸ್ಮರಿಸಲಾಗುತ್ತದೆ. ಜೈ ಜವಾನ್, ಜೈ ಕಿಸಾನ್' ಎಂದು ನಾಯ್ಡು ಟ್ವೀಟಿಸಿದ್ದಾರೆ.

ಶಾಸ್ತ್ರಿಯವರಿಗೆ ಗೌರವ ಸಲ್ಲಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, 'ಶಾಸ್ತ್ರಿ ಅವರ ಸರಳತೆ ಮತ್ತು ಸಂಕಲ್ಪ ಇಂದಿಗೂ ಸ್ಫೂರ್ತಿಯ ಮೂಲವಾಗಿದೆ. ಕಾಂಗ್ರೆಸ್‌ನ ಈ ಪುತ್ರನಿಗೆ ವಂದನೆಗಳು' ಅವರು ಟ್ವೀಟ್ ಮಾಡಿದ್ದಾರೆ.

ರಣದೀಪ್ ಸುರ್ಜೇವಾಲಾ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಶಾಸ್ತ್ರಿ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.