ಎಂ.ಕೆ.ಸ್ಟಾಲಿನ್ ಮತ್ತು ಯೋಗಿ ಆದಿತ್ಯನಾಥ
ಚೆನ್ನೈ: ‘ಭಾಷೆ ಕುರಿತು ತಮಿಳುನಾಡಿನಲ್ಲಿ ನ್ಯಾಯ, ಘನತೆಯ ರಕ್ಷಣೆಗಾಗಿ ಹೋರಾಟ ನಡೆಯುತ್ತಿದೆ. ಅದು, ಮತ ರಾಜಕಾರಣದ ಗಲಭೆಯಲ್ಲ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಉತ್ತರ ಪ್ರದೇಶದ ಸಿ.ಎಂ ಯೋಗಿ ಆದಿತ್ಯನಾಥ ಅವರ ಹೇಳಿಕೆಗೆ, ‘ದ್ವೇಷ ಕುರಿತಂತೆ ಯೋಗಿ ಆದಿತ್ಯನಾಥ ಅವರು ಉಪದೇಶ ಮಾಡುವುದೇ ನಗೆಪಾಟಲಿನ ಸಂಗತಿ’ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಉತ್ತರ ಪ್ರದೇಶದ ಸಿ.ಎಂ ಅವರು, ‘ವೋಟ್ ಬ್ಯಾಂಕ್ ಕೈತಪ್ಪುವ ಭೀತಿಯಿಂದ ಸ್ಟಾಲಿನ್ ಅವರು ಧರ್ಮ ಮತ್ತು ಭಾಷೆ ಆಧಾರದಲ್ಲಿ ವಲಯವನ್ನು ವಿಭಜಿಸುತ್ತಿದ್ದಾರೆ’ ಎಂದಿದ್ದರು.
‘ನಾವು ಯಾವುದೇ ಭಾಷೆ ವಿರೋಧಿಸುತ್ತಿಲ್ಲ. ಆದರೆ, ಕೋಮುವಾದ, ಭಾಷೆಯನ್ನು ಹೇರುವುದನ್ನು ವಿರೋಧಿಸುತ್ತಿದ್ದೇವೆ. ಇದು ನ್ಯಾಯ, ಘನತೆಗಾಗಿ ನಡೆದಿರುವ ಹೋರಾಟ’ ಎಂದಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, 'ಸ್ಟಾಲಿನ್ ತಮ್ಮನ್ನು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ರಕ್ಷಕನಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಕುಟುಂಬದ ಮಾಲೀಕತ್ವದ ಶಾಲೆಗಳಲ್ಲಿ 3 ಭಾಷೆ ಕಲಿಸುತ್ತಿರುವುದು ದೇಶಕ್ಕೇ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.