ಅಲಹಾಬಾದ್ ಹೈಕೋರ್ಟ್
ಲಖನೌ: ಉದ್ಯೋಗಕ್ಕಾಗಿ ದಂಪತಿ ಬೇರೆಯಾಗಿ ವಾಸ ಮಾಡುವುದು ಕ್ರೌರ್ಯವೂ ಅಲ್ಲ ತೊರೆದು ಹೋಗುವುದೂ ಎಂದಲ್ಲ. ವಿಚ್ಚೇದನ ಕೊಡಲು ಇದು ಆಧಾರವೂ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪಿತ್ತಿದೆ.
ನ್ಯಾಯಮೂರ್ತಿಗಳಾದ ಸುಮಿತ್ರಾ ದಯಾಳ್ ಹಾಗೂ ದೊನಾಡಿ ರಮೇಶ್ ಅವರಿದ್ದ ವಿಭಾಗೀಯ ಪೀಠದ ಇತ್ತೀಚೆಗೆ ಈ ತೀರ್ಪು ಪ್ರಕಟಿಸಿದೆ.
ಈ ಮೇಲಿನ ಕಾರಣದಿಂದ ವಿಚ್ಚೇದನ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕಾನ್ಪುರ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
‘ನಾವಿಬ್ಬರು ಕಳೆದ 21 ವರ್ಷದಿಂದ ಬೇರೆಯಾಗಿ ವಾಸಿಸುತ್ತಿದ್ದೇವೆ. ನಾನು ಝಾನ್ಸಿಯಲ್ಲಿ ಲೋಕೊ ಪೈಲಟ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ 2000ನೇ ಇಸವಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಅವರು ಔರಾಯಿಯಾ ಜಿಲ್ಲೆಯ ಶಾಲೆಯೊಂದರಲ್ಲಿ ಕರ್ತವ್ಯನಿರತರಾಗಿದ್ದಾರೆ’ ಎಂದು ಅರ್ಜಿದಾರ ಪತಿ ದೂರಿನಲ್ಲಿ ಹೇಳಿದ್ದರು.
ಇಬ್ಬರ ವಾಸಸ್ಥಳ ಕೇವಲ 2 ಕಿ.ಮಿ ಅಂತರದಲ್ಲಿದೆ.
ಬಳಿಕ 2007ರಲ್ಲಿ ಕ್ರೌರ್ಯ ಹಾಗೂ ತೊರೆದು ಹೋಗಿದ್ದಾರೆ ಎನ್ನುವ ಕಾರಣ ನೀಡಿ ಪತಿ ವಿಚ್ಛೇದನ ಕೋರಿದ್ದರು.
ತಾನು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದಾಗ ಪತಿ ನನ್ನನ್ನು ಭೇಟಿಯಾಗಿದ್ದರು. ನನಗೆ ವೈದಕೀಯ ರಜೆ ಮಂಜೂರಾದಾಗಲೂ ನನ್ನ ಶಾಲೆಗೆ ಬಂದಿದ್ದರು ಎಂದು ಪತ್ನಿ ವಿಚಾರಣೆ ವೇಳೆ ಹೇಳಿದ್ದಾರೆ.
ಪತ್ನಿಯ ನೇಮಕಾತಿ ಸ್ಥಳವು ಪತಿಯ ಪೂರ್ವಜರ ಮನೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದೆ. ಸಂಪೂರ್ಣ ಜ್ಞಾನ ಮತ್ತು ಒಪ್ಪಿಗೆಯೊಂದಿಗೆ ಔರಾಯಿಯಾಗೆ ಪತ್ನಿ ನೇಮಕಾತಿ ಪಡೆದಿದ್ದಾಳೆ ಎಂಬುದನ್ನು ನಂಬಲು ಕಷ್ಟವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಒಬ್ಬರು ಝಾನ್ಸಿಯಲ್ಲಿ ಮತ್ತೊಬ್ಬರು ಔರಾಯಿಯಾ ಕೆಲಸ ಮಾಡುವ ಕಾರಣ ಪಕ್ಷಕಾರರು ಪ್ರತ್ಯೇಕವಾಗಿ ಉಳಿದಿರಬಹುದು. ಈ ಕಾರಣಕ್ಕಾಗಿ ವಿಚ್ಚೇದನ ಮಂಜೂರು ಮಾಡಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.