ADVERTISEMENT

12 ವರ್ಷಗಳ ಹಿಂದೆ ಉತ್ತರ ಪ್ರದೇಶದಿಂದ ನಾಪತ್ತೆಯಾಗಿದ್ದ ಮಹಿಳೆ ನೇಪಾಳದಲ್ಲಿ ಪತ್ತೆ

ಪಿಟಿಐ
Published 4 ಸೆಪ್ಟೆಂಬರ್ 2021, 15:16 IST
Last Updated 4 ಸೆಪ್ಟೆಂಬರ್ 2021, 15:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಂಚಿ: ಉತ್ತರ ಪ್ರದೇಶದಿಂದ ನಾಪತ್ತೆಯಾದ 12 ವರ್ಷಗಳ ನಂತರ ಜಾರ್ಖಂಡ್ ಮಹಿಳೆಯನ್ನು ನೇಪಾಳದಿಂದ ರಕ್ಷಿಸಲಾಗಿದೆ. ಈಗ ಆಕೆಯನ್ನು ತನ್ನ ತವರು ರಾಜ್ಯಕ್ಕೆ ಕರೆತರಲಾಗುತ್ತಿದೆ ಎಂದು ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ.

ಇಷ್ಟು ವರ್ಷ ಕಳೆದ ಮೇಲೆ ಆಕೆ ಸಿಗುವ ಭರವಸೆಯನ್ನೇ ಕೈಬಿಟ್ಟಿದ್ದ ಐತ್‌ಬರಿಯಾಳ ಕುಟುಂಬದ ಸದಸ್ಯರು ಈಗ ದೆಹಲಿಯಿಂದ ಆಕೆ ಮನೆಗೆ ಹಿಂತಿರುಗುವುದನ್ನೇ ಕಾಯುತ್ತಿದ್ದಾರೆ. ಆಕೆ ಕಾಠ್ಮಂಡುವಿನಲ್ಲಿರುವ ಆಶ್ರಮದಲ್ಲಿ ತಂಗಿದ್ದಾಳೆ ಎಂದು ನೇಪಾಳದಲ್ಲಿ ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್‌ನಿಂದಾಗಿ ಆಕೆಯ ಬಗ್ಗೆ ತಿಳಿದಿದೆ. ಬಳಿಕ ಆಕೆಯನ್ನು ಮರಳಿ ಕರೆತರಲು ಜಾರ್ಖಂಡ್ ಸರ್ಕಾರದ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಶುಕ್ರವಾರ ನೇಪಾಳದಿಂದ ದೆಹಲಿಗೆ ಬಂದಿಳಿದಿರುವ ಆಕೆಯು ಭಾನುವಾರ ದೆಹಲಿಯಿಂದ ರೈಲಿನಲ್ಲಿ ರಾಂಚಿಗೆ ಬರಲಿದ್ದಾರೆ.

ADVERTISEMENT

'ಈಗ 32 ವರ್ಷದ ಐತ್‌ಬರಿಯಾ ತನ್ನ ತಂದೆಯೊಂದಿಗೆ ಇಟ್ಟಿಗೆ ಕೆಲಸಕ್ಕೆಂದು ಉತ್ತರ ಪ್ರದೇಶಕ್ಕೆ ಹೋಗಿದ್ದ ವೇಳೆ ಅಲ್ಲಿಂದ ನಾಪತ್ತೆಯಾಗಿದ್ದಳು. ಸುಮಾರು 12 ವರ್ಷಗಳ ಹಿಂದೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಗೋರಖ್‌ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ, ಐತ್‌ಬರಿಯಾ ಎಲ್ಲಿಯೂ ಪತ್ತೆಯಾಗಿರಲಿಲ್ಲ' ಎಂದು ಜಾರ್ಖಂಡ್ ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದೆ.

ಐತ್‌ಬರಿಯಾ, ಲೋಹರ್ದಾಗಾದ ಭಂಡಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಸ್ಮೋನಾ ಗ್ರಾಮದ ನಿವಾಸಿ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಉತ್ತರ ಪ್ರದೇಶದಿಂದ ಆಕೆಯನ್ನು ಹರಿಯಾಣಕ್ಕೆ ಕರೆದೊಯ್ದು ನಂತರ ನೇಪಾಳಕ್ಕೆ ಕಳುಹಿಸಲಾಗಿದೆ.

ಪ್ರತಿಯೊಂದು ಮಗುವನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಈ ಭೀತಿಯಿಂದ ಸಾಕಷ್ಟು ಬಳಲುತ್ತಿದ್ದೇವೆ ಆದರೆ ಇನ್ನು ಮುಂದೆ ಹೀಗಾಗುವುದಿಲ್ಲ. ಈ ಪ್ರಕರಣವು ಕಳ್ಳಸಾಗಣೆಗೆ ಸಂಬಂಧಿಸಿದ್ದರೆ, ನಮ್ಮ ರಾಜ್ಯದಿಂದ ದೂರವಿರುವಂತೆ ಕಳ್ಳಸಾಗಣೆದಾರರಿಗೆ ನಾನು ಎಚ್ಚರಿಕೆ ನೀಡುತ್ತೇನೆ, ಇಲ್ಲದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸೊರೆನ್ ಹೇಳಿದ್ದಾರೆ.

ನೇಪಾಳದ ವ್ಯಕ್ತಿಯೊಬ್ಬರು ಟ್ವೀಟ್ ಮೂಲಕ ನೇಪಾಳದಲ್ಲಿರುವ ಆಶ್ರಮದಲ್ಲಿ ಆಕೆ ತಂಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ರಾಜ್ಯ ಸರ್ಕಾರ ಆಕೆಯನ್ನು ಅಲ್ಲಿಂದ ಮರಳಿ ಕರೆತರಲು ತಕ್ಷಣವೇ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.