
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಎಐ ಚಿತ್ರ
ಲಖನೌ: ಉತ್ತರ ಪ್ರದೇಶದ ಲಖನೌನಲ್ಲಿ 21 ವರ್ಷದ ಯುವಕನೊಬ್ಬ ‘ನಿನ್ನ ಭವಿಷ್ಯ ಸರಿಯಾಗಿ ರೂಪಿಸಿಕೋ’ ಎಂದ ತಂದೆಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ.
49 ವರ್ಷದ ಮನ್ವೇಂದ್ರ ಎಂಬುವವರು ಲಖನೌನಲ್ಲಿ ಮೆಡಿಕಲ್ ಸ್ಟೋರ್ ಹಾಗೂ ಮದ್ಯ ಮಾರಾಟದ ವ್ಯವಹಾರವನ್ನು ನಡೆಸುತ್ತಿದ್ದರು. ತಮ್ಮ ಮಗ ಅಕ್ಷಯ್ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕು ಎಂಬ ಆಶಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ವೈದ್ಯನಾಗುವಂತೆ ಪ್ರೋತ್ಸಾಹಿಸುತ್ತಿದ್ದರು. ಆದರೆ, ಅಕ್ಷಯ್ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ, ಇದೇ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಕೆಲವೊಮ್ಮೆ ಅಕ್ಷಯ್ ಈ ವಿಚಾರವಾಗಿ ಮನೆಬಿಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 4:30ರ ವೇಳೆಗೆ ತಂದೆ–ಮಗನ ನಡುವೆ ತೀವ್ರ ಜಗಳ ಉಂಟಾಗಿದೆ. ಈ ವೇಳೆ ಅಕ್ಷಯ್ ಗುಂಡು ಹಾರಿಸಿ ತನ್ನ ತಂದೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಮೂರನೇ ಮಹಡಿಯಿಂದ ಕೆಳ ಮಹಡಿಗೆ ಎಳೆದುಕೊಂಡು ಬಂದು, ಅದನ್ನು ತುಂಡಾಗಿ ಕತ್ತರಿಸಲು ಮುಂದಾಗಿದ್ದಾನೆ.
ಇದನ್ನು ನೋಡಿದ ಸಹೋದರಿಗೆ ಹತ್ಯೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ, ಆಕೆಯ ಮುಂದೆಯೇ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಕಸದಂತೆ ವಿಲೇವಾರಿ ಮಾಡಿದ್ದಾನೆ. ದೇಹದ ಕೆಲವು ಭಾಗಗಳನ್ನು ಮನೆಯಲ್ಲಿದ್ದ ನೀಲಿ ಬಣ್ಣದ ಡ್ರಮ್ನಲ್ಲಿ ಸಂಗ್ರಹಿಸಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಧಿವಿಜ್ಞಾನ ಪರೀಕ್ಷೆ ನಡೆಸಿದ್ದಾರೆ. ವಿಲೇವಾರಿ ಮಾಡಲಾದ ದೇಹದ ಭಾಗಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಕ್ರಾಂತ್ ವೀರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.