ADVERTISEMENT

ಅಪ್ಪಂದಿರ ಅಖಾಡದಲ್ಲಿ ಮಕ್ಕಳ ತಾಲೀಮು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:40 IST
Last Updated 14 ಅಕ್ಟೋಬರ್ 2018, 19:40 IST
   

ಭೋಪಾಲ್‌: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಅಖಾಡದ ಅಬ್ಬರದ ಪ್ರಚಾರದಲ್ಲಿ ನಾಲ್ವರು ಪ್ರಮುಖ ರಾಜಕಾರಣಿಗಳ ಮಕ್ಕಳು ಎಲ್ಲರ ಗಮನ ಸೆಳೆದಿದ್ದಾರೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ 24 ವರ್ಷದ ಪುತ್ರ ಕಾರ್ತಿಕೇಯ ಚೌಹಾಣ್‌ ಬುಧನಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ತಂದೆಯ ಪರವಾಗಿ ಮನೆ, ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ.

ಭೋಪಾಲ್‌ನಲ್ಲಿ ಹಾಲು ಮತ್ತು ಹೂವಿನ ಅಂಗಡಿ ಹೊಂದಿರುವ ಕಾರ್ತಿಕೇಯ ಕಳೆದ ವರ್ಷವಷ್ಟೇ ರಾಜಕೀಯ ಪ್ರವೇಶಿಸಿದ್ದಾರೆ. ಸಣ್ಣಪುಟ್ಟ ಸಭೆ, ಸಮಾರಂಭಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವ ಕಲೆಯನ್ನು ಅವರು ರೂಢಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಗೆ ತಾಲೀಮು ನಡೆಸಿದ್ದಾರೆ.

ADVERTISEMENT

ಗುನಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ 19 ವರ್ಷದ ಮಗ ಮನಾರ‍್ಯಮನ್‌ ಸಿಂಧಿಯಾ ಅವರು ತಮ್ಮ ಹಾಸ್ಯಪ್ರಜ್ಞೆ ಮತ್ತು ಕಚಗುಳಿ ಇಡುವ ಭಾಷಣಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ಅನುಪಸ್ಥಿತಿಯಲ್ಲಿ ಗ್ವಾಲಿಯರ್‌ ರಾಜಕಾರಣವನ್ನು ನಿಭಾಯಿಸುವ ಮಟ್ಟಿಗೆ ಅವರ ಪುತ್ರ ಬೆಳೆದು ನಿಂತಿದ್ದಾನೆ. ಕ್ಷೇತ್ರದ ಸ್ಥಳೀಯ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಕಾಂಗ್ರೆಸ್‌ ಹಿರಿಯ ಧುರೀಣ ದಿಗ್ವಿಜಯ್ ಸಿಂಗ್‌ ಅವರ ಪುತ್ರ ಮತ್ತು ಶಾಸಕ ಜೈ ವರ್ಧನ್‌ ತಮ್ಮ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ ರಾಘೋಗಡದಿಂದ ಅಖಾಡಕ್ಕೆ ಇಳಿದಿದ್ದಾರೆ.

ಮತದಾರರು, ಕಾರ್ಯಕರ್ತರ ಜತೆ ತುಂಬಾ ಸಲುಗೆಯಿಂದ ಬೆರೆಯುವ 34 ವರ್ಷದ ಜೈ ವರ್ಧನ್‌ ಕ್ಷೇತ್ರದ ಜನತೆಯ ಜತೆಗೂ ನಿರಂತರ ಒಡನಾಟ ಹೊಂದಿದ್ದಾರೆ. ಈ ಮೊದಲು ದಿಗ್ವಿಜಯ್‌ ಸಿಂಗ್‌ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ನಾಲ್ವರು ನಾಯಕರ ಮಕ್ಕಳ ಪೈಕಿ ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಕಮಲನಾಥ್‌ ಅವರ ಮಗ ನಕುಲ್‌ ನಾಥ್‌ ತುಂಬಾ ಗಂಭೀರ ಸ್ವಭಾವದವರು. ಛಿಂದ್ವಾರಾ ವಿಧಾನಸಭಾ ಕ್ಷೇತ್ರದಲ್ಲಿ ತಂದೆಯ ಪ್ರಚಾರದ ಹೊಣೆಯನ್ನು ನಕುಲ್‌ ಅವರು ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.