ADVERTISEMENT

ಮಹಾರಾಷ್ಟ್ರ: ಪಂಢರಾಪುರ ದೇವಸ್ಥಾನದಲ್ಲಿ ಮಹಾ ಪೂಜೆ ನೆರವೇರಿಸಿದ ಉದ್ಧವ್‌ ಠಾಕ್ರೆ

ಪಿಟಿಐ
Published 20 ಜುಲೈ 2021, 7:18 IST
Last Updated 20 ಜುಲೈ 2021, 7:18 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಪುಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಮಂಗಳವಾರ ಸೋಲಾಪುರ ಜಿಲ್ಲೆಯ ಪಂಢರಾಪುರ ಪಟ್ಟಣದ ದೇವಸ್ಥಾನವೊಂದರಲ್ಲಿ ಆಶಾಡ ಏಕಾದಶಿ ಸಂದರ್ಭದಲ್ಲಿ ವಿಠ್ಹಲ ಮತ್ತು ರುಕ್ಮಿಣಿ ದೇವರಿಗೆ ಮಹಾ ಪೂಜೆ ಸಲ್ಲಿಸಿದರು. ಈ ವೇಳೆ ಕೋವಿಡ್‌ ಬಿಕ್ಕಟ್ಟು ಆದಷ್ಟು ಬೇಗ ತೊಲಗಲಿ ಹಾಗೂ ಎಲ್ಲರೂ ಆರೋಗ್ಯದಿಂದ ಇರಲಿ ಎಂದು ಅವರು ಪ್ರಾರ್ಥಿಸಿದರು.

ಹಲವು ವರ್ಷಗಳ ಸಂಪ್ರದಾಯದಂತೆ ‘ಆಷಾಢ ಏಕಾದಶಿ’ಯಂದು ಮುಖ್ಯಮಂತ್ರಿಗಳು ತಮ್ಮ ಪತ್ನಿ ರಶ್ಮಿ ಠಾಕ್ರೆ ಅವರೊಂದಿಗೆ ಬೆಳಿಗ್ಗೆ 2.30ಕ್ಕೆ ಮಹಾ ಪೂಜೆ ನೆರವೇರಿಸಿದರು. ‘ಆಷಾಢ ಏಕಾದಶಿ’ಯು ಹಿಂದೂ ಹಬ್ಬಗಳಲ್ಲಿ ‍ಪ್ರಮುಖವಾದದ್ದು. ಈ ದಿನದಂದು ರಾಜ್ಯದಾದ್ಯಂತ ಭಕ್ತಾದಿಗಳು ಕಾಲ್ನಡಿಗೆ ಮೂಲಕ (ವಾರಿ ಯಾತ್ರೆ) ಪಂಢರಪುರ ದೇವಸ್ಥಾನಕ್ಕೆ ಬರುತ್ತಾರೆ. ಈ ದಿನದಂದೇ ವಾರಿ ಯಾತ್ರೆ ಪ್ರಾರಂಭಗೊಳ್ಳುತ್ತದೆ. ಈ ಯಾತ್ರೆಗೆ ಬರುವ ಭಕ್ತರನ್ನು ವಾರ್ಕಾರಿಗಳು ಎಂದೂ ಕರೆಯಲಾಗುತ್ತದೆ.

ಪೂಜೆ ಬಳಿಕ ಮಾತನಾಡಿದ ಠಾಕ್ರೆ, ‘ಪಂಢರಾಪುರದಲ್ಲಿ ಭಕ್ತಿ ಸಾಗರ ಹರಿಯಲಿ. ವಾರ್ಕಾರಿಗಳು ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಬರಲು ದೇವರು ಅವಕಾಶ ಕಲ್ಪಿಸಲಿ. ಕೋವಿಡ್‌–19 ಆದಷ್ಟು ಬೇಗ ನಿವಾರಣೆ ಆಗಲಿ ಹಾಗೂ ಜನರು ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದರು.

ADVERTISEMENT

‘ಪ್ರತಿವರ್ಷ ಹಲವಾರು ಭಕ್ತರು ಕಾಲ್ನಡಿಗೆ ಮೂಲಕ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಅವರಲ್ಲಿ ಭಕ್ತಿ ಮತ್ತು ಆತ್ಮ ವಿಶ್ವಾಸ ಹೆಚ್ಚುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಜನರಿಗೆ ಆತ್ಮ ವಿಶ್ವಾಸ ಅತಿ ಅಗತ್ಯವಾಗಿದೆ’ ಎಂದು ಅವರು ಹೇಳಿದರು.

ಈ ವೇಳೆ ಅವರ ಪುತ್ರ ಆದಿತ್ಯ ಠಾಕ್ರೆ ಅವರೂ ಉಪಸ್ಥಿತರಿದ್ದರು. ವಾರ್ಕಾರಿ ದಂಪತಿ ಕೇಶವ ಕೊಲ್ಟೆ ಮತ್ತು ಇಂದೂಭಾಯಿ ಕೊಲ್ಟೆ ಅವರು ಠಾಕ್ರೆ ಕುಟುಂಬದೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.