ಮಹಾ ಕುಂಭಮೇಳ
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅಸಮರ್ಪಕವಾದ ಶೌಚಾಲಯಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಕೋರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ಉತ್ತರ ಪ್ರದೇಶ ಸರ್ಕಾರ, ಪ್ರಯಾಗ್ರಾಜ್ ಮೇಳ ಪ್ರಾಧಿಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸರಿಯಾದ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದರಿಂದ ಯಾತ್ರಾರ್ಥಿಗಳು ಗಂಗಾ ನದಿಯ ದಡದಲ್ಲಿ ಬಯಲು ಶೌಚಕ್ಕೆ ತೆರಳುತ್ತಿದ್ದಾರೆ ಎಂದು ಈಚೆಗೆ ವರದಿಯಾಗಿತ್ತು.
ಮಹಾಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್ದಲ್ಲಿ ಮೂರು ನದಿಗಳು ಸೇರುವ ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ (ಎಫ್ಸಿ) ಬ್ಯಾಕ್ಟೀರಿಯಾ ಪ್ರಮಾಣವು ಅನುಮತಿಸಲ್ಪಟ್ಟ ಮಿತಿಗಿಂತ ಅಧಿಕ ಇದೆ. ನೀರು ಸ್ನಾನಕ್ಕೆ ಯೋಗ್ಯವಾದ ಗುಣಮಟ್ಟ ಹೊಂದಿಲ್ಲ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಈಚೆಗೆ ಎನ್ಜಿಟಿಗೆ ಮಾಹಿತಿ ನೀಡಿತ್ತು.
ಸಂಸ್ಕರಿಸದೇ ಇರುವ ನೀರು ಅಥವಾ ಕಲುಷಿತ ನೀರು ನದಿಗೆ ಸೇರ್ಪಡೆಗೊಂಡಾಗ ಮತ್ತು ಮಲದಲ್ಲಿ ಈ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಕಂಡುಬರುತ್ತದೆ. ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಗೆ ಈ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ.
ಫೀಕಲ್ ಕೋಲಿಫಾರ್ಮ್ ಬ್ಯಾಕ್ಷೀರಿಯಾದ ಅನುಮತಿಸಿದ ಮಿತಿಯು ಪ್ರತಿ 100 ಮಿಲಿ ಲೀಟರ್ಗೆ 2,500 ಎಂಪಿಎನ್ (ಗರಿಷ್ಠ ಇರಬಹುದಾದ ಸಂಖ್ಯೆ) ಇರಬೇಕು ಎಂದು ಮಂಡಳಿ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.