ಕಾಲ್ಪನಿಕ ಚಿತ್ರ
ಗೂಗಲ್ ಜೆಮ್ನಿ ಎಐ ಚಿತ್ರ
ಮುಂಬೈ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವೆಗಳು (ICDS) ಯೋಜನೆಯಡಿ ದೀಪಾವಳಿ ಉಡುಗೊರೆಯಾಗಿ ₹2 ಸಾವಿರ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಈ ವಿಷಯವನ್ನು ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಸಚಿವೆ ಅದಿತಿ ತಟ್ಕರೆ ಶುಕ್ರವಾರ ತಿಳಿಸಿದ್ದಾರೆ.
‘ಇದಕ್ಕಾಗಿ ಸರ್ಕಾರವು ₹40.61 ಕೋಟಿಯನ್ನು ಮಂಜೂರು ಮಾಡಿದೆ. ಈ ಕುರಿತು ಸರ್ಕಾರದ ನಿರ್ಣಯವು ಗುರುವಾರಕ್ಕೆ ಅನ್ವಯಿಸುವಂತೆ ಜಾರಿಗೊಳಿಸಲಾಗಿದೆ’ ಎಂದಿದ್ದಾರೆ.
‘ಮಹಿಳೆ ಮತ್ತು ಮಕ್ಕಳ ಆರೈಕೆ, ಪೋಷಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೊಡುಗೆ ದೊಡ್ಡದು. ಅನನ್ಯ ಸೇವೆಗಾಗಿ ಮತ್ತು ಹಬ್ಬದ ಸಂದರ್ಭದಲ್ಲಿ ಅವರ ಸಂಭ್ರಮ ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ’ಭಾವು ಬೀಜ ಉಡುಗೊರೆ’ ನೀಡಲು ನಿರ್ಧರಿಸಿದೆ’ ಎಂದಿದ್ದಾರೆ.
‘ಪ್ರತಿಯೊಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಮ್ಮ ಸಮಾಜದ ಸಾಮರ್ಥ್ಯ. ಐಸಿಡಿಎಸ್ ಆಯುಕ್ತರ ಮೂಲಕ ಫಲಾನುಭವಿಗಳ ಖಾತೆಗಳಿಗೆ ಅತಿ ಶೀಘ್ರದಲ್ಲಿ ಹಣ ಹಾಕಲಾಗುವುದು. ಅದರಿಂದ ಅವರ ದೀಪಾವಳಿ ಇನ್ನಷ್ಟು ಪ್ರಕಾಶಮಾನವಾಗಲಿ ಎಂಬುದು ಸರ್ಕಾರದ ಉದ್ದೇಶ’ ಎಂದು ಸಚಿವೆ ಅದಿತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.