ADVERTISEMENT

ಕುಂಭಮೇಳದ ಕುರಿತು ಆರೋಪ ಆಧಾರರಹಿತ: ಯೋಗಿ ಆದಿತ್ಯನಾಥ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2025, 10:32 IST
Last Updated 19 ಫೆಬ್ರುವರಿ 2025, 10:32 IST
<div class="paragraphs"><p>ಯೋಗಿ ಆದಿತ್ಯನಾಥ್</p></div>

ಯೋಗಿ ಆದಿತ್ಯನಾಥ್

   

(ಪಿಟಿಐ ಚಿತ್ರ)

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಅದು 'ಮೃತ್ಯು ಕುಂಭ'ವಾಗಿ ಪರಿವರ್ತನೆ ಆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.

ADVERTISEMENT

ಜನವರಿ 29ರಂದು ಮೌನಿ ಅಮಾವಾಸ್ಯೆಯಂದು ಸಂಗಮದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಉತ್ತರ ಪ್ರದೇಶದ ಸದನದ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, 'ನಾವು ಇಲ್ಲಿ ಕುಂಭಮೇಳದ ಕುರಿತು ಚರ್ಚಿಸುತ್ತಿರುವಾಗಲೇ 56 ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಹಾಗಿರುವಾಗ ಆಧಾರರಹಿತ ಆರೋಪಗಳನ್ನು ಮಾಡುವುದು 56 ಕೋಟಿ ಭಕ್ತರ ನಂಬಿಕೆಯೊಂದಿಗೆ ಆಟವಾಡಿದಂತೆ' ಎಂದು ಹೇಳಿದ್ದಾರೆ.

'ಕುಂಭಮೇಳವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಆಯೋಜಿಸುತ್ತಿಲ್ಲ. ಇಡೀ ಸಮಾಜವೇ ನಡೆಸಿಕೊಡುತ್ತಿದೆ. ಸರ್ಕಾರ ಅವರ ಸೇವೆಯನ್ನು ಮಾಡುತ್ತಿದೆ. ಈ ಶತಮಾನದ ವಿಶಿಷ್ಟ ಕುಂಭಮೇಳವನ್ನು ನಡೆಸಿಕೊಡುವ ಅವಕಾಶ ನಮ್ಮ ಸರ್ಕಾರಕ್ಕೆ ದೊರಕಿರುವುದು ನಮ್ಮ ಅದೃಷ್ಟ' ಎಂದು ಹೇಳಿದ್ದಾರೆ.

ಕಾಲ್ತುಳಿತ, ರಸ್ತೆ ಅಪಘಾತ ಸೇರಿದಂತೆ ಕುಂಭಮೇಳಕ್ಕೆ ಸಂಬಂಧಿಸಿದ ಅವಘಡಗಳಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಅವರು, 'ಸರ್ಕಾರವು ಸಂತ್ರಸ್ತರೊಂದಿಗೆ ಇದ್ದು, ಅವರಿಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

'ಮೊದಲ ದಿನದಿಂದಲೂ ವಿರೋಧ ಪಕ್ಷಗಳು ಕುಂಭಮೇಳದ ವಿರುದ್ಧ ನಿಂತಿವೆ. ಕುಂಭಮೇಳದ ಸಿದ್ಧತೆಯ ಕುರಿತಾಗಿನ ಚರ್ಚೆಯಲ್ಲೂ ನೀವು ಭಾಗವಹಿಸಿಲ್ಲ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್‌ಜೆಡಿ ಮತ್ತು ಟಿಎಂಸಿ ನಾಯಕರು ಕುಂಭಮೇಳದ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಸನಾತನ ಧರ್ಮದ ಕಾರ್ಯಕ್ರಮವನ್ನು ಆಯೋಜಿಸುವುದು ಅಪರಾಧವಾದರೆ, ಸರ್ಕಾರವು ಆ ಅಪರಾಧವನ್ನು ಮಾಡುತ್ತಲೇ ಇರುತ್ತದೆ' ಎಂದು ಹೇಳಿದ್ದಾರೆ.

'ಸಂಗಮದ ನೀರಿನ ನೈರ್ಮಲ್ಯದ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದೆ. ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿಪಡಿಸುತ್ತದೆ' ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.