ADVERTISEMENT

ಮೋದಿ ಜೀ, ಆಸ್ಕರ್ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳದಂತೆ ವಿನಂತಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮಾರ್ಚ್ 2023, 14:19 IST
Last Updated 14 ಮಾರ್ಚ್ 2023, 14:19 IST
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ   

ನವದೆಹಲಿ: ಚಲನಚಿತ್ರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರದಾನವಾಗಿದೆ. 95ನೇ ಆಸ್ಕರ್‌ ಪ್ರಶಸ್ತಿಯಲ್ಲಿ ಭಾರತದ ಒಂದು ಕಿರು ಸಾಕ್ಷ್ಯಚಿತ್ರ, ಒಂದು ಸಿನಿಮಾದ ಹಾಡು ಗೌರವಕ್ಕೆ ಪಾತ್ರವಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಆಸ್ಕರ್ ಸಮಾರಂಭದಲ್ಲಿ ಭಾರತದ ಕೀರ್ತಿ ಕುರಿತು ಮಾತನಾಡಿದ್ದಾರೆ. ವಿಜೇತರನ್ನು ಅಭಿನಂದಿಸಿದ ಅವರು, ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಎಂದಿದ್ದಾರೆ.

‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಹಾಗೂ ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಆದರೆ, ನನ್ನ ಏಕೈಕ ವಿನಂತಿಯೆಂದರೆ, ‘ಆಸ್ಕರ್‌’ ವಿಚಾರವಾಗಿ ಆಡಳಿತ ಪಕ್ಷದವರು (ಬಿಜೆಪಿ) ಕ್ರೆಡಿಟ್ ತೆಗೆದುಕೊಳ್ಳಬಾರದು. ನಾವು ನಿರ್ದೇಶನ ಮಾಡಿದ್ದೇವೆ, ನಾವು ಬರೆದಿದ್ದೇವೆ, ಮೋದಿ ಅವರು ನಿರ್ದೇಶನ ಮಾಡಿದ್ದರು ಎಂದು ಹೇಳಿಕೊಳ್ಳಬಾರದು’ ಎಂದು ಖರ್ಗೆ ಹೇಳಿದರು. ಖರ್ಗೆ ಮಾತಿಗೆ ಇಡೀ ಸಂಸತ್‌ ಕ್ಷಣಕಾಲ ನಗೆಗಡಲಲ್ಲಿ ತೇಲಿತು.

ADVERTISEMENT

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಸಚಿವರಾದ ಪಿಯೂಷ್ ಗೋಯಲ್, ಎಸ್. ಜೈಶಂಕರ್, ಸಚಿವ ಮನ್ಸುಖ್ ಮಾಂಡವಿಯಾ, ಭೂಪೇಂದರ್ ಯಾದವ್ ಮುಗುಳ್ನಕ್ಕರು.

ಈ ಸನ್ನಿವೇಶದ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಎಂಬ ಕಿರು ಸಾಕ್ಷ್ಯಚಿತ್ರ, ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು’ ಎಂಬ ಹಾಡು ಆಸ್ಕರ್ ಪ್ರಶಸ್ತಿಯ ಗರಿ ಮುಡಿಸಿಕೊಂಡಿವೆ. ದಿ ಎಲಿಫೆಂಟ್‌ ವಿಸ್ಪರರ್ಸ್‌ ತಮಿಳು ಸಾಕ್ಷ್ಯಚಿತ್ರವಾದರೆ ಆರ್‌ಆರ್‌ಆರ್‌ ತೆಲುಗು ಭಾಷೆಯ ನಿರ್ಮಾಣವಾಗಿರುವ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.