ಖರ್ಗೆ ಪೋಸ್ಟರ್ಗೆ ಮಸಿ ಬಳಿದಿರುವುದು
ಕೃಪೆ: X/@Sohom03
ಕೋಲ್ಕತ್ತ: ಇಂಡಿಯಾ ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧರಿಸುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚಿತ್ರಕ್ಕೆ ಕೋಲ್ಕತ್ತದಲ್ಲಿ ಮಸಿ ಬಳಿಯಲಾಗಿದೆ.
ಇಲ್ಲಿರುವ ಕಾಂಗ್ರೆಸ್ನ ರಾಜ್ಯ ಕಚೇರಿಯ ಮುಂಭಾದಲ್ಲಿರುವ ಹಲವು ಪೋಸ್ಟರ್ಗಳಲ್ಲಿ ಖರ್ಗೆ ಅವರ ಚಿತ್ರಕ್ಕೆ ಮಸಿ ಬಳಿಯಲಾಗಿದೆ.
ಖರ್ಗೆ ಅವರ ಚಿತ್ರವಿದ್ದ ಪೋಸ್ಟರ್ ಮೇಲೆ ‘ತೃಣಮೂಲ ಕಾಂಗ್ರೆಸ್ನ ಏಜೆಂಟ್’ ಎಂದು ಬರೆಯಲಾಗಿದೆ.
ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಧೀರ್ ಚೌಧರಿ, ಪೊಲೀಸ್ ದೂರು ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅಲ್ಲದೆ ಪೋಸ್ಟರ್ಗಳನ್ನು ತೆರವುಗೊಳಿಸುವಂತೆಯೂ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅವರು ತಮ್ಮ ತವರು ಕ್ಷೇತ್ರ ಬರರಾಂಪುರದಲ್ಲಿ ಇದ್ದಾರೆ.
ಶನಿವಾರ ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಪಕ್ಷದ ಹಿರಿಯ ನಾಯಕರು ಹಾಗೂ ಅಧೀರ್ ಚೌಧರಿ ನಡುವೆ ಭಿನ್ನಾಭಿಪ್ರಾಯ ಉಂಟುಮಾಡಲು ಟಿಎಂಸಿ ಕಾರ್ತಕರ್ತರೇ ಮಾಡಿದ ಕೃತ್ಯ ಇದು ಎಂದು ಪಕ್ಷದ ನಾಯಕರೊಬ್ಬರು ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿಯನ್ನು ನಂಬಬಾರದು. ಅವರು ಬಿಜೆಪಿ ಜೊತೆ ಹೋಗುವ ಸಾಧ್ಯತೆಯೂ ಇದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಖರ್ಗೆ, ‘ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿಕೂಟದ ಜೊತೆ ಇದ್ದಾರೆ. ಸರ್ಕಾರಕ್ಕೆ ಸೇರುವುದಾಗಿ ಆವರು ಇತ್ತೀಚೆಗೆ ಹೇಳಿದ್ದರು. ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ಮತ್ತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಪ್ಪಿಗೆ ಇಲ್ಲದವರು ಹೋಗಬಹುದು’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.